ನರೇಶ್ ಶೆಣೈ ಬಂಧನಕ್ಕೆ ಒತ್ತಾಯಿಸಿ ಸಚಿವ ರೈಗೆ ಮನವಿ
ವಿನಾಯಕ ಬಾಳಿಗಾ ಹತ್ಯೆ ಪ್ರಕರಣ

ಮಂಗಳೂರು, ಮೇ 24; ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಮತ್ತು ಇತರರನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿ ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್, ಹತ್ಯೆಗೀಡಾದ ವಿನಾಯಕ್ ಬಾಳಿಗ ತಂದೆ ಬಿ.ರಾಮಚಂದ್ರ ಬಾಳಿಗ, ತಂಗಿ ಹರ್ಷಾ ಅವರು ಸಚಿವರಿಗೆ ಮನವಿ ಸಲ್ಲಿಸಿ ಘಟನೆ ನಡೆದು ಇಂದಿಗೆ ಎರಡು ತಿಂಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಆಗಿಲ್ಲ. ನರೇಶ್ ಶೆಣೈ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಮತ್ತೊಂದೆಡೆ ಮುಖ್ಯ ಆರೋಪಿಯ ಬಂಧನವಾಗದೆ ಇರುವುದರಿಂದ ಸಾಕ್ಷನಾಶವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ಆರೋಪಿ ಪದೇ ಪದೇ ತಾನಿರುವ ಸ್ಥಳವನ್ನು ಬದಲಾಯಿಸುತ್ತಿರುವುದರಿಂದ ಹಿಡಿಯಲು ಕಷ್ಟವಾಗಿದೆ. ಆದರೆ ಪೊಲೀಸ್ ಇಲಾಖೆ ಶೀಘ್ರದಲ್ಲಿಯೆ ಆರೋಪಿಯನ್ನು ಬಂಧಿಸುತ್ತದೆ ಎಂಬ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಮಾಜಿ ಮನಪಾ ಸದಸ್ಯ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.





