ಚಿಕ್ಕಮಗಳೂರು: ದ್ವಿತೀಯ ಪಿಯುನಲ್ಲಿ ನಾಗಶ್ರೇಯಸ್ಗೆ 592ಅಂಕ
ಚಿಕ್ಕಮಗಳೂರು, ಮೇ 25: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಯಿ ಏಂಜಲ್ಸ್ ಶಾಲೆಯ ವಿದ್ಯಾರ್ಥಿ ನಾಗಶ್ರೇಯಸ್ 592 ಅಂಕಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪೃಥ್ವಿನಾವಡ 586, ಸುಧಾಂಶು ಕಷ್ಯಪ್ 583, ಅನುಷ್ಕಾ ಅನಿಲ್ 582, ಚೇತನ್ 582, ಪ್ರೇರಣಾ 582, ಅಚ್ಚುತ್ 580, ಸಿಂಚನಾ ಡಿಸೋಜಾ 580, ಆಯೇಶಾ 579 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ. ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ನಾಗಶ್ರೇಯಸ್ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ವಿದ್ಯುನ್ಮಾನಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು ಕನ್ನಡ 98 ಮತ್ತು ಇಂಗ್ಲಿಷ್ 94 ಅಂಕಗಳಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಜಿಲ್ಲೆಯಲ್ಲಿ ಬೆಳಗಿಸಿದ್ದಾರೆ.
ತೇರ್ಗಡೆಯಾದ 251 ವಿದ್ಯಾರ್ಥಿಗಳಲ್ಲಿ 119 ಅತ್ಯುನ್ನತ ಶ್ರೇಣಿ, 131 ಪ್ರಥಮ ಶ್ರೇಣಿ, ಓರ್ವ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 99ರಷ್ಟು ಫಲಿತಾಂಶ ಲಭಿಸಿದೆ. ಭೌತಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು, ರಸಾಯನ ಶಾಸ್ತ್ರ 3, ಗಣಿತ 11, ವಿದ್ಯುನ್ಮಾನ ಶಾಸ್ತ್ರ 7, ಜೀವಶಾಸ್ತ್ರ 3 ಮತ್ತು ಗಣಕ ವಿಜ್ಞಾನದಲ್ಲಿ 4ವಿದ್ಯಾರ್ಥಿಗಳು ಸೇರಿದಂತೆ 33ವಿದ್ಯಾರ್ಥಿಗಳು ಮೇಲ್ಕಂಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿ ಪರಸ್ಪರ ಸಿಹಿ ಹಂಚಿಕೊಂಡು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್, ಮುಖ್ಯ ಪ್ರಾಂಶುಪಾಲರಾದ ವಿಜಯಾನಾಗೇಶ್, ಪ್ರಾಂಶುಪಾಲ ಕೆ.ಕೆ.ನಾಗರಾಜ್ ಮತ್ತು ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸಂಭ್ರಮಿಸಿದರು.
ಎಂ.ಜೆ.ಕಾರ್ತಿಕ್ ಮಾತನಾಡಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಟಾಪರ್ ಆಗಿ ಸಾಯಿ ಏಂಜಲ್ಸ್ ಕಾಲೇಜು ಪ್ರಥಮ ಸ್ಥಾನ ಬಂದಿದೆ ಎಂಬುದು ಹರ್ಷ ತಂದಿದೆ. ಎಲ್ಲ ಶಿಕ್ಷಕರ ಶ್ರಮದ ಜೊತೆ ವಿದ್ಯಾರ್ಥಿಗಳು ಸ್ಪಂದಿಸಿದ್ದರ ಫಲವಾಗಿ ಈ ಫಲಿತಾಂಶ ಲಭಿಸಿದೆ ಎಂದರು. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಗಶ್ರೇಯಸ್ ಮಾತನಾಡಿ, ಕಾಲೇಜಿನ ಪರಿಸರ ಶಿಕ್ಷಣ ಕಲಿಕೆಗೆ ಪೂರಕವಾದ ಪರಿಸರ ಶಿಕ್ಷಕರು ತನಗೆ ನೀಡಿದ ಪ್ರೋತ್ಸಾಹ, ಪೋಷಕರ ಸಹಕಾರ ಅಂಕ ಗಳಿಕೆಗೆ ಸಾಧ್ಯವಾಯಿತು ಎಂದರು.