ಬಿಜೆಪಿಯ ಹಿಟ್ ವಿಕೆಟ್! ಎರಡು ಸಲ

ಕರ್ನಾಟಕದಲ್ಲಿ ಕಳೆದ ಬಾರಿ ಇದ್ದ ಬಿಜೆಪಿಯ ಆಡಳಿತದ ಸಂದರ್ಭ. ಸುದ್ದಿ ವಾಹಿನಿಯೊಂದು ಬಿಜೆಪಿ ಸೇರಿದ್ದ ವಿ.ಸೋಮಣ್ಣರ ವಿರುದ್ಧ ಗುರುತರವಾದ ಆರೋಪವೊಂದನ್ನು ಮಾಡಿತ್ತು. ವಾಹಿನಿಯೊಂದಿಗೆ ದೂರವಾಣಿಯೊಂದಿಗೆ ವಿ. ಸೋಮಣ್ಣ ನೀವು ಆಧಾರವಿಲ್ಲದೇ ಮಾತನಾಡುತ್ತಿದ್ದೀರಿ ಎಂದಾಗ ಸುದ್ದಿವಾಹಿನಿಯ ಪ್ರತಿನಿಧಿ ‘ನಾವು ಆರೋಪ ಮಾಡಿದ್ದೀವಿ, ಅದನ್ನು ಸುಳ್ಳು ಎಂದು ಸಾಬೀತುಪಡಿಸುವುದು ನಿಮ್ಮ ಜವಾಬ್ದಾರಿ’ ಎಂದು ಜೋರು ದನಿಯಲ್ಲಿ ಹೇಳಿದ್ದ! ಇದೇ ರೀತಿಯ ಘಟನೆಯನ್ನೀಗ ದಿಲ್ಲಿಯ ರಾಜಕಾರಣದಲ್ಲಿ ನೋಡುವ ಸದವಕಾಶ ನಮಗೆ. ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಮಾಡಿದ ಆರೋಪಗಳು ಸುಳ್ಳೋ ನಿಜವೋ ಎಂದು ಸಾಬೀತುಪಡಿಸುವ ಜವಾಬ್ದಾರಿ ಬಿಜೆಪಿಯ ತಲೆಯ ಮೇಲೆ ಬಿದ್ದಿದೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಎತ್ತಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬಿಜೆಪಿ(ಉದಾಹರಣೆಯಾಗಿ ಜೆ.ಎನ್.ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಘಟನೆಗಳು ಮುಂದಿವೆ) ಈ ವಿಚಾರದಲ್ಲೂ ಕೊಡಲಿಯನ್ನೇ ಕೈಗೆತ್ತಿಕೊಂಡು ತನ್ನ ಕೈಯನ್ನೇ ಘಾಸಿಗೊಳಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಓದಿದ್ದೇನನ್ನು ಎನ್ನುವುದೇ ಆಪ್ ಪಕ್ಷದ ಪ್ರಶ್ನೆ. ಈ ಪ್ರಶ್ನೆಯನ್ನು ಮಾಹಿತಿ ಹಕ್ಕು ವಿಚಾರದ ಮೂಲಕವೂ ಹಲವರು ಕೇಳಿದ್ದರು, ಅವರಿಗೆ ಉತ್ತರ ಸಿಕ್ಕಿರಲಿಲ್ಲ. ಪ್ರಧಾನಿಯಾಗಲು ಶಿಕ್ಷಣಾರ್ಹತೆ ನಮ್ಮಲ್ಲಿಲ್ಲ ಎಂದಾಗ ಪ್ರಧಾನಿಯಾದವರು ಹತ್ತನೇ ತರಗತಿ ಓದಿದ್ದರೂ, ಎರಡೆರಡು ಪದವಿ ಪಡೆದಿದ್ದರೂ, ಅಕ್ಷರವೇ ಗೊತ್ತಿಲ್ಲದಿದ್ದರೂ ವ್ಯತ್ಯಾಸವೇನಾಗುವುದಿಲ್ಲ. ಆದರಿಲ್ಲಿ ಆಪ್ ಪಕ್ಷದ ಪ್ರಶ್ನೆಯನ್ನು ಬೆಂಬಲಿಸುತ್ತಿರುವವರು ಕೇಳುತ್ತಿರುವುದು ಪ್ರಧಾನಿಯಾದವರು ಚುನಾವಣೆಗೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು. ಆ ಲೆಕ್ಕದಲ್ಲಿ ಚುನಾವಣೆಗೆ ನಿಲ್ಲುವ ಯಾರೇ ಆದರೂ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆಯಾಗಲೀ ಮತ್ತೊಂದು ಅಂಶದ ಬಗ್ಗೆಯಾಗಲೀ ಸುಳ್ಳಾಡುವುದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ಆಪ್ ಪಕ್ಷಕ್ಕೆ ನರೇಂದ್ರ ಮೋದಿಯವರು ಸುಳ್ಳಾಡಿದ್ದು ಅಪರಾಧ ಎಂದೆನ್ನಿಸಿದ್ದರೆ ಕಾನೂನಿನ ಪ್ರಕಾರವೇ ಹೋರಾಟ ಮಾಡಬಹುದಿತ್ತು. ಕಾನೂನಾತ್ಮಕ ಹೋರಾಟವನ್ನೂ (ಮಾಹಿತಿ ಕೇಳುವ ಮೂಲಕ) ಅವರು ಮಾಡುತ್ತಿರುವವರಾದರೂ ಈ ವಿಷಯದಿಂದ ಸಿಗುವ ಪ್ರಚಾರದಿಂದಾಗಿ ಹೆಚ್ಚು ಜೋರಿನ ದನಿಯಲ್ಲಿ ಕೇಳುತ್ತಿದ್ದಾರೆ ಎಂದು ಯಾರಿಗಾದರೂ ಅರಿವಾಗುತ್ತದೆ. ಸರಿ, ಆಪ್ ಆರೋಪ ಮಾಡಿತು. ಅದಕ್ಕೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರಬೇಕಿತ್ತು? ಒಂದೋ ಮೋದಿಯವರ ಪದವಿ ಸರ್ಟಿಫಿಕೇಟುಗಳನ್ನು ಮಾಧ್ಯಮಗಳಿಗೆ ತಲುಪಿಸಿ ಇದು ಸತ್ಯ ಎಂದಿದ್ದರೆ ಸಾಕಿತ್ತು. ಮೋದಿಯವರ ಪದವಿಯ ಬಗೆಗಿನ ಆರೋಪಗಳು ನಿಜವೇ ಆಗಿದ್ದಲ್ಲಿ, ಅದು ಕಾನೂನಿನ ಪ್ರಕಾರ ತಪ್ಪುಎಂದು ಸಾಬೀತಾಗುವವರೆಗೆ ಸಭ್ಯನಂತೆ ಪೋಸು ಕೊಟ್ಟುಕೊಂಡು ಸುಮ್ಮಗಿರಬಹುದಿತ್ತು. ಸ್ವತಃ ಬಿಜೆಪಿಯ ಅಧ್ಯಕ್ಷರೂ ಮತ್ತು ವಿತ್ತ ಸಚಿವರು ಮೋದಿಯವರ ಡಿಗ್ರಿ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಪತ್ರಿಕಾಗೋಷ್ಠಿಯಲ್ಲಿ ಕುಳಿತು ಬಿಟ್ಟರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆ ಸರ್ಟಿಫಿಕೇಟುಗಳ ಪೋಸ್ಟ್ ಮಾರ್ಟಂ ನಡೆದು ಹೋಯಿತು. ಇದು ಹೇಗೆ ನಕಲಿ ಎಂದು ಎಳೆಎಳೆಯಾಗಿ ವಿವರಿಸಲಾಯಿತು.
ಈ ಇಡೀ ಪ್ರಹಸನದಲ್ಲಿ ಗೆದ್ದಿದ್ದು -ತಾತ್ಕಾಲಿಕವಾಗಿ - ಆಪ್. ಮೊದಲ ಬಾರಿಗೆ ಹಿಟ್ ವಿಕೆಟ್ ಆದ ನಂತರವೂ ಬಿಜೆಪಿ ಪಾಠ ಕಲಿ ತಂತಿಲ್ಲ. ಎರಡನೇ ಸಲ ಖುಷಿಖುಷಿಯಿಂದ ಹಿಟ್ ವಿಕೆಟ್ ಆಗಿರುವುದು ನಮ್ಮ ಪಕ್ಕದ ಕೇರಳದಲ್ಲಿ. ಕೇರಳದ ಚುನಾವಣೆ ಸಂದರ್ಭದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇರಳದ ಆದಿವಾಸಿ ಮಕ್ಕಳ ಮರಣ ಪ್ರಮಾಣ, ಅವರ ಅಪೌಷ್ಟಿಕತೆಯ ಕುರಿತು ಹೇಳುವಾಗ ಈ ಅಂಕಿಸಂಖ್ಯೆಗಳು ಸೊಮಾಲಿಯಾ ದೇಶದ ಅಂಕಿಸಂಖ್ಯೆಗಳಂತಿದೆ ಎಂದುಬಿಟ್ಟಿದ್ದಾರೆ. ಅದು ಸತ್ಯವೇ ಇದ್ದಿರಬಹುದು. ಮತ್ತು ನಮ್ಮ ಪತ್ರಿಕೆಗಳೇ ಅನೇಕ ಅಭಿವೃದ್ಧಿ ಸೂಚ್ಯಂಕಗಳನ್ನು ವರದಿ ಮಾಡುವಾಗ ಇತರೆ ರಾಷ್ಟ್ರಗಳಿಗಿಂತ ಅದು ಹೇಗೆ ಕಡಿಮೆಯಿದೆ ಎಂದು ಹೋಲಿಸುತ್ತಾರೆ. ಅದು ಅವಮಾನವೆಂದೇನೂ ಓದುಗನಿಗೆ ಅನ್ನಿಸುವುದಿಲ್ಲ. ಆದರೆ ಸೊಮಾಲಿಯಾಗೆ ಕೇರಳವನ್ನು ಹೋಲಿಸಿದ್ದಕ್ಕೆ (ಹೋಲಿಸಿದ್ದು ಒಂದು ನಿರ್ದಿಷ್ಟ ಪಂಗಡವನ್ನಾದರೂ ಅವರೂ ಕೇರಳಕ್ಕೇ ಸೇರುತ್ತಾರೆನ್ನುವುದೇ ವಿರೋಧಿಗಳಿಗೆ ಸಾಕಾಗಿತ್ತು) ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ‘ಪೋಮೋನೆಮೋದಿ’ ಎಂಬ ಹ್ಯಾಷ್ ಟ್ಯಾಗ್ ವ್ಯಾಪಕವಾಗಿಬಿಟ್ಟಿತು. ಮತ್ತೇನಿಲ್ಲ, ಬಿಜೆಪಿಯವರು ಕೇರಳದ ಆದಿವಾಸಿ ಮಕ್ಕಳಲ್ಲಿರುವ ಅಪೌಷ್ಟಿಕತೆಯ, ಮರಣ ಪ್ರಮಾಣದ ಅಧಿಕೃತ ಪಟ್ಟಿಯನ್ನಿಡಿದುಕೊಂಡು ಸೊಮಾಲಿಯಾದ ಅಂಕಿಸಂಖ್ಯೆಗಳನ್ನಿಟ್ಟುಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರೆ ಸಾಕಿತ್ತು. ಬಿಜೆಪಿಗೇನೂ ಈ ಹೇಳಿಕೆಯಿಂದ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ ಕೇರಳದಲ್ಲಿ, ಯಾಕೆಂದರೆ ಅಲ್ಲಿ ಬಿಜೆಪಿ ಪಕ್ಷ ಇನ್ನೂ ಅಸ್ತಿತ್ವದ ಹುಡುಕಾಟದಲ್ಲಿದೆ. ಪತ್ರಿಕೆಗಳಿಗೊಂದು ಮೇಲ್ ಕಳಿಸುವ ಮೂಲಕ ಮುಗಿಸ ಬಹುದಾದ್ದ ಕೆಲಸಕ್ಕೆ ಅಮಿತ್ ಶಾ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಅಧಿಕೃತ ಅಂಕಿಸಂಖ್ಯೆಗಳನ್ನು ಪ್ರದರ್ಶಿಸದೆ ಔಟ್ ಲುಕ್ನಲ್ಲಿ ವರ್ಷಗಳ ಹಿಂದೆ ಪ್ರಕಟವಾಗಿದ್ದ ಲೇಖನದ ಮುಖಪುಟವನ್ನು ಹಿಡಿದುಕೊಂಡು ಪತ್ರಿಕಾಗೋಷ್ಠಿ ನಡೆಸಿದರು. ಅಮಿತ್ ಶಾ ದುರದೃಷ್ಟಕ್ಕೆ ಆ ಮುಖಪುಟದಲ್ಲಿದ್ದ ಚಿತ್ರ ಕೇರಳದ್ದಾಗಿರದೆ ಶ್ರೀಲಂಕಾದ ತಮಿಳು ನಿರಾಶ್ರಿತರದ್ದಾಗಿತ್ತು. ಅಲ್ಲಿಗೆ ಬಿಜೆಪಿ ಎರಡನೇ ಸಲವೂ ಹಿಟ್ ವಿಕೆಟ್ಟಾಗಿತ್ತು!
ಸೂಕ್ಷ್ಮ್ಮವಾಗಿ ಗಮನಿಸಿದರೆ ಇದೆಲ್ಲ ವರ್ತನೆಗಳನ್ನೂ, ಪ್ರತಿಕ್ರಿಯೆಯ ರೀತಿಗಳನ್ನು ಕಲಿಸಿದ್ದೇ ಬಿಜೆಪಿ. ಕಳೆದ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದ ಬಿಜೆಪಿ, ಮಹಾತ್ಮ ಗಾಂಧಿಯಿಂದ ಹಿಡಿದು ಕಾಂಗ್ರೆಸ್ನ ಪುಡಿ ರಾಜಕಾರಣಿಯವರೆಗೆ ಎಲ್ಲರ ಫೋಟೋಶಾಪ್ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿದಾಡು ವಂತೆ ಮಾಡ್ತಿತ್ತು. ಅದು ಸತ್ಯವೋ ಸುಳ್ಳೋ ಎಂದು ಸಾಬೀತುಪಡಿಸಬೇಕಾದ ಜವಾಬ್ದಾರಿ ಇದ್ದಿದ್ದು ಚಿತ್ರ ಸೃಷ್ಟಿಸಿದವರಿಗಲ್ಲ ಬದಲಿಗೆ ಮಹಾತ್ಮ ಗಾಂಧಿಯ, ಕಾಂಗ್ರೆಸ್ಸಿನ ಬೆಂಬಲಿಗರಿಗೆ! ನಾವು ಆರೋಪ ಮಾಡ್ತೀವಿ, ಸುಳ್ಳೆಂದು ನೀವು ಸಾಬೀತು ಮಾಡ್ಕಳ್ಳಿ ಎನ್ನುವುದು ಬಿಜೆಪಿ ಮತ್ತವರ ಬೆಂಬಲಿಗರ ಧೋರಣೆಯಾಗಿತ್ತು. ನರೇಂದ್ರ ಮೋದಿಯವರ ಡಿಗ್ರಿಗೆ ಸಂಬಂಧಪಟ್ಟಂತೆಯೂ ಇದೇ ಧೋರಣೆಯಿದೆ. ಆದರೀಗ ಸಾಬೀತು ಮಾಡಿಕೊಳ್ಳುವ ಜವಾಬ್ದಾರಿ ಮಾತ್ರ ಬಿಜೆಪಿಯ ಮೇಲೆ ಬಿದ್ದಿದೆ. ಯೂ - ಟರ್ನ್!







