ಸಿಐಎಸ್ಎಫ್ ಸಿಬ್ಬಂದಿಯ ಬವಣೆಯನ್ನು ಕಣ್ಣಾರೆ ಕಂಡ ಸಂಸದೀಯ ಸಮಿತಿ
ಹೊಸದಿಲ್ಲಿ,ಮೇ 25: ಗೃಹ ಸಚಿವಾಲಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರು ಬುಧವಾರ ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯ ಸಿಐಎಸ್ಎಫ್ ಸಿಬ್ಬಂದಿಯ ಬ್ಯಾರಕ್ಗಳಿಗೆ ಭೇಟಿ ನೀಡಿ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ಅವರು ಪಡುತ್ತಿರುವ ಬವಣೆಯನ್ನು ಕಣ್ಣಾರೆ ಕಂಡಿತು.
ಸಿಐಎಸ್ಎಫ್ ಸಿಬ್ಬಂದಿ ಸೌಲಭ್ಯಗಳು ಮತ್ತು ಸ್ಥಳಾವಕಾಶದ ಕೊರತೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ಆಘಾತಗೊಂಡ ಸಮಿತಿಯು ಬ್ಯಾರಕ್ಗಳಲ್ಲಿ ವಾಸಿಸುವ ಸಿಬ್ಬಂದಿಯ ವಾಸ ಸ್ಥಿತಿಗಳನ್ನು ಬದಲಿಸಲು ಶಿಫಾರಸುಗಳನ್ನು ತುರ್ತಾಗಿ ಅಂತಿಮಗೊಳಿಸಲು ನಿರ್ಧರಿಸಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಪಿ.ಭಟ್ಟಾಚಾರ್ಯ ಅಧ್ಯಕ್ಷತೆಯ ಸಮಿತಿಯ ಮುಂದೆ ಹಾಜರಾಗಿದ್ದ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿಅವರು, ಪೊಲೀಸ್ ಪಡೆಗಳ ಆಧುನೀಕರಣ ಕುರಿತು ಹಾಗೂ ಈ ನಿಟ್ಟಿನಲ್ಲಿ ಸರಕಾರವು ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿಗಳನ್ನು ನೀಡಿದರು. ಆ ಬಳಿಕ ಸಮಿತಿ ಸದಸ್ಯರು ವಸ್ತುಸ್ಥಿತಿಯನ್ನು ಅರಿಯಲು ವಿಮಾನ ನಿಲ್ದಾಣದಲ್ಲಿನ ಸಿಐಎಸ್ಎಫ್ ಸಿಬ್ಬಂದಿಯ ಬ್ಯಾರಕ್ಗಳಿಗೆ ಭೇಟಿ ನೀಡಿದರು.
ಸಿಐಎಸ್ಎಫ್ ಸಿಬ್ಬಂದಿಯ ಬ್ಯಾರಕ್ಗಳಲ್ಲಿಯ ಅವ್ಯವಸ್ಥೆ ತನಗೆ ಆಘಾತವನ್ನುಂಟು ಮಾಡಿದೆ ಎಂದು ಇತ್ತೀಚಿಗೆ ಸಮಿತಿಯ ಸದಸ್ಯರಾಗಿ ಸೇರ್ಪಡೆಗೊಂಡಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಭೇಟಿಯ ಬಳಿಕ ಟ್ವೀಟ್ ಮಾಡಿದ್ದಾರೆ.