ಜಿಶಾ ಕೊಲೆ ಪ್ರಕರಣ: ಜೋಮೋನ್ ವಿರುದ್ಧ ಮುಖ್ಯಮಂತ್ರಿಗೆ ಪಿ.ಪಿ ತಂಗಚ್ಚನ್ ದೂರು
ತಿರುವನಂತಪುರಂ, ಮೇ 27: ಜಿಶಾ ಕೊಲೆಪ್ರಕರಣದಲ್ಲಿ ತನ್ನ ವಿರುದ್ಧ ಜೋಮೋನ್ ಪುತ್ತನ್ಪುರಕ್ಕಲ್ ಮಾಡಿರುವ ಆರೋಪದ ಕುರಿತು ಯುಡಿಎಫ್ ಸಂಚಾಲಕ ಪಿ.ಪಿ. ತಂಗಚ್ಚನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಿಗೆ ದೂರು ನೀಡಿದ್ದಾರೆ. ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಜೋಮೋನ್ ನಡೆಸುತ್ತಿರುವ ಅಪಪ್ರಚಾರವು ಇಡೀ ಜಿಶಾ ಪ್ರಕರಣವನ್ನು ಬುಡಮೇಲುಗೊಳಿಸುವ ತಂತ್ರವಾಗಿದೆ ಎಂದು ತಂಗಚ್ಚನ್ ಮುಖ್ಯಮಂತ್ರಿಗೆ ವಿವರಿಸಿದ್ದಾರೆ. ತನ್ನ ವಿರುದ್ದ ಈ ಮೊದಲು ಜೋಮೋನ್ ನೀಡಿದ್ದ ದೂರಿನ ಮೂಲಗಳ ಕುರಿತು ತನಿಖೆ ನಡೆಸಬೇಕು ಹಾಗೂ ಇಂತಹ ಅಪಪ್ರಚಾರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಂಗಚ್ಚನ್ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಜಿಶಾರ ತಾಯಿಯ ಕುರಿತು ತನಗೆ ಗೊತ್ತಿಲ್ಲ ಎಂದು ತಂಗಚ್ಚನ್ ನಿನ್ನೆ ಹೇಳಿದ್ದರು. ಕೊಲೆಕೃತ್ಯದಲ್ಲಿ ತನಗೂ ತನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಜಿಶಾ ತಾಯಿ ತನ್ನ ಮನೆಯಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ್ದಾರೆಂದು ಹೇಳಿರುವುದು ಶುದ್ಧ ಸುಳ್ಳು. ತನ್ನ ಮನೆಗೆ ಅವರು ಒಂದು ದಿವಸವೂ ಕೆಲಸ ಮಾಡಿಲ್ಲ ಎಂದು ತಂಗಚ್ಚನ್ ಸ್ಪಷ್ಟ ಪಡಿಸಿದ್ದಾರೆ.
ಈ ನಡುವೆ ಜಿಶಾರ ತಂದೆ ಪಾಪು ಮಗಳ ಮೇಲೆ ಆರೋಪ ಹೊರಿಸಿದ್ದಕ್ಕಾಗಿ ಜೋಮೋನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ-ಪಂಗಡಗಳ ಮೇಲಿನ ಅಕ್ರಮ ತಡೆ ಕಾನೂನು ಪ್ರಕಾರ ಜೋಮೋನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.