ಪ.ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಪ್ರಮಾಣವಚನ ಸ್ವೀಕಾರ
ಕೋಲ್ಕತಾ,ಮೇ 27: ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಸತತ ಎರಡನೇ ಬಾರಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು. ತೃಣಮೂಲ ಕಾಂಗ್ರೆಸ್ನಿಂದ ಚುನಾವಣೋತ್ತರ ಹಿಂಸಾಚಾರ ಆರೋಪದಲ್ಲಿ ಕಾಂಗ್ರೆಸ್ ಮತ್ತು ಎಡರಂಗ ಬಹಿಷ್ಕರಿಸಿದ್ದ ಈ ಸಮಾರಂಭದಲ್ಲಿ 18 ಹೊಸಮುಖಗಳು ಸೇರಿದಂತೆ ಅವರ ಸಂಪುಟದ 42 ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರ ಸಚಿವರಾದ ಅರುಣ್ ಜೇಟ್ಲಿ,ಅಶೋಕ ಗಜಪತಿ ಮತ್ತು ಬಾಬುಲ್ ಸುಪ್ರಿಯೊ,ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ,ಉ.ಪ್ರದೇಶ ಮುಖ್ಯಮಂತ್ರಿ ಅಖಿಲೇಶ ಯಾದವ,ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು 61ರ ಹರೆಯದ ಬ್ಯಾನರ್ಜಿಯವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.
ತನ್ನ ‘ಟ್ರೇಡ್ ಮಾರ್ಕ್ ’ಆಗಿರುವ ಬಿಳಿಯ ಸೀರೆಯನ್ನು ಧರಿಸಿ ದ.ಕೋಲ್ಕತಾದ ತನ್ನ ಕಾಲಿಘಾಟ್ ನಿವಾಸದಿಂದ ಹೊರಬಿದ್ದ ಬ್ಯಾನರ್ಜಿ ಸಮಾರಂಭಕ್ಕೆ ತೆರಳಲು ಕಾರನ್ನು ಹತ್ತುವ ಮುನ್ನ ನೆರೆದಿದ್ದ ಜನರತ್ತ ಕೈ ಬೀಸುತ್ತ ಸ್ವಲ್ಪ ದೂರ ನಡೆದುಕೊಂಡು ಸಾಗಿದರು.
ಆರ್ಜೆಡಿ ಅಧ್ಯಕ್ಷ ಲಾಲುಪ್ರಸಾದ ಯಾದವ,ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಡಿಎಂಕೆ ನಾಯಕಿ ಕನ್ಹಿಮೋಳಿ ಸೇರಿದಂತೆ ರಾಜಕೀಯ ನಾಯಕರ ಗಡಣವೇ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿತ್ತು.
ತೃಣಮೂಲ ಚುನಾವಣೆಯ ಬಳಿಕ ಹಿಂಸಾಚಾರ ನಡೆಸಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ನಾಯಕರೂ ಸಮಾರಂಭದಿಂದ ದೂರವೇ ಇದ್ದರು.
ನೂತನ ಸಂಪುಟವು ಮುಖ್ಯಮಂತ್ರಿ ಸೇರಿದಂತೆ 29 ಸಂಪುಟ ದರ್ಜೆ ಸಚಿವರು,ಐವರು ಸಹಾಯಕ ಸಚಿವರು(ಸ್ವತಂತ್ರ) ಮತ್ತು ಎಂಟು ಸಹಾಯಕ ಸಚಿವರನ್ನೊಳಗೊಂಡಿದೆ.