ಪತ್ನಿಯ ಶವವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಆಸ್ಟ್ರೇಲಿಯಕ್ಕೆ ಮರಳಿದ ಎನ್ಆರ್ಐ ಪತಿ !
ಹೈದರಾಬಾದ್ : ವಿಚಿತ್ರ ಘಟನೆಯೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಶಂಕಾಸ್ಪದವಾಗಿ ಮೃತ ಪಟ್ಟ 30 ವರ್ಷದ ವಿವಾಹಿತ ಮಹಿಳೆಯ ಶವವನ್ನು ಆಕೆಯ ತವರೂರಾದ ಹೈದರಾಬಾದಿನ ವಿಮಾನ ನಿಲ್ದಾಣಕ್ಕೆ ಶನಿವಾರ ತರಲಾಯಿತಾದರೂ ಮೃತಳ ಪತಿತನ್ನ ಪತ್ನಿಯ ಮೃತದೇಹವನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಆಸ್ಟ್ರೇಲಿಯಕ್ಕೆೆ ಮರಳಿದ್ದಾನೆ.
ಮೃತ ಮಹಿಳೆಯನ್ನು ರಮ್ಯ ಕೃಷ್ಣ ಪೆಂಡುರ್ತಿ ಎಂದು ಗುರುತಿಸಲಾಗಿದೆ. ಆಕೆನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿರುವ ಮಹಂತ್ ನರ್ಲ ಎಂಬವನನ್ನು ವಿವಾಹವಾಗಿದ್ದಳು. ರಮ್ಯಳ ಹೆತ್ತವರು ಆಪಾದಿಸುವಂತೆ ಆಕೆಯನ್ನುಹೆಚ್ಚುವರಿ ವರದಕ್ಷಿಣೆ ಬೇಡಿಕೆಯಿರಿಸಿದ್ದ ಆಕೆಯ ಪತಿ ಕೊಂದಿದ್ದರೆ, ತನ್ನ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳೆಂದು ಮಹಂತ್ ಆರೋಪಿಸಿದ್ದಾನೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದ ರಮ್ಯ ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಮದುವೆ ಸಂದರ್ಭ ಆಕೆಯ ಹೆತ್ತವರು ಮಹಂತ್ ಗೆ ರೂ 50 ಲಕ್ಷ ವರದಕ್ಷಿಣೆ ಹಾಗೂ ಚಿನ್ನ ನೀಡಿದ್ದರು. ಆದರೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಂತ್ ಹೆಚ್ಚುವರಿ ವರದಕ್ಷಿಣೆ ನೀಡಬೇಕೆಂದು ಆಗ್ರಹಿಸಿ ಆಕೆಗೆ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.