ರಾಜ್ಯಸಭೆ ಚುನಾವಣೆ : ಬಿ.ಎಂ.ಫಾರೂಖ್ಗೆ 10 ಪಕ್ಷೇತರ ಶಾಸಕರ ಬೆಂಬಲ

ಬೆಂಗಳೂರು, ಮೇ 28: ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿರುವ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಖ್ಗೆ ಪಕ್ಷೇತರರು ಸೇರಿದಂತೆ 10 ಮಂದಿ ಶಾಸಕರು ಬೆಂಬಲ ಸೂಚಿಸಿದ್ದಾರೆ.
ಮೊಳಕಾಲ್ಮೂರು ಶಾಸಕ ಎಸ್.ತಿಪ್ಪೇಸ್ವಾಮಿ(ಬಿಎಸ್ಸಾರ್ ಕಾಂಗ್ರೆಸ್), ಆಳಂದ ಶಾಸಕ ಬಿ.ಆರ್.ಪಾಟೀಲ್(ಕೆಜೆಪಿ), ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್(ಪಕ್ಷೇತರ), ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ (ಕರ್ನಾಟಕ ಮಕ್ಕಳ ಪಕ್ಷ).
ಕುಡಚಿ ಶಾಸಕ ಪಿ.ರಾಜೀವ್(ಬಿಎಸ್ಸಾರ್ ಕಾಂಗ್ರೆಸ್), ಶಾಹಪುರ ಶಾಸಕ ಗುರು ಪಾಟೀಲ್ ಸಿರುವಾಳ್(ಕೆಜೆಪಿ), ಕಾರವಾರ ಶಾಸಕ ಸತೀಶ್ ಸೈಲ್ (ಪಕ್ಷೇತರ), ಭಟ್ಕಳ ಶಾಸಕ ಮಂಕಾಳ ಎಸ್.ವೈದ್ಯ(ಪಕ್ಷೇತರ), ಖಾನಾಪುರ ಶಾಸಕ ಅರವಿಂದ ಸಿ.ಪಾಟೀಲ್(ಪಕ್ಷೇತರ) ಹಾಗೂ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ(ಪಕ್ಷೇತರ) ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೇ 30ರಂದು ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಆಯ್ಕೆ
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ಹಾಗೂ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಮೇ 30ರಂದು ಬೆಳಗ್ಗೆ 9.30ಕ್ಕೆ ವಿಧಾನಸೌಧದಲ್ಲಿ ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





