ಪುರಸಭೆ ಸಾಮಾನ್ಯ ಸಭೆ : ಇಂಜಿನಿರ್ಗಳನ್ನು ಬೇರೆ ಪುರಸಭೆಗೆ ನಿಯೋಜಿಸಿರುವುದು ಆಕ್ಷೇಪಾರ್ಹ

ಕಾರ್ಕಳ,ಮೇ 28 : ಕಾರ್ಕಳ ಪುರಸಭೆಯ ಇಂಜಿನಿಯರ್ಗಳನ್ನು ಇತರ ಪುರಸಭೆಗಳಿಗೆ ನಿಯೋಜಿಸಿರುವುದಕ್ಕೆ ಆಕ್ಷೇಪಿಸಿದ್ದು, ಇನ್ನು ಮುಂದೆ ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಪುರಸಭೆ ಆಡಳಿತ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಪುರಸಭೆಗೆ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸುಭಿತ್ ಕುಮಾರ್, ಕಾರ್ಕಳದ ಪುರಸಭೆಯಲ್ಲಿ ಇಂಜಿನಿಯರ್ಗಳ ಕೊರತೆಯಿದೆ. ಈ ನಡುವೆ ಇದ್ದ ಇಂಜಿನಿಯರ್ಗಳನ್ನು ಕಾಪು ಮತ್ತು ಕುಂದಾಪುರ ಪುರಸಭೆಗೆ ವಾರಕ್ಕೆ ಮೂರು ದಿನಗಳ ಕಾಲ ನಿಯೋಜಿಸಲಾಗಿದೆ. ಇದು ಸರಿಯಲ್ಲ. ಉಡುಪಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಿ ಎಂದರು. ಉಪಾಧ್ಯಕ್ಷ ಗಿರಿಧರ್ ನಾಯಕ್ ಮಾತನಾಡಿ, ಪುರಸಭೆ ಸದಸ್ಯರ ಮುಖವೆತ್ತಿ ಮಾತನಾಡದ ಜಿಲ್ಲಾಧಿಕಾರಿಗಳು, ಸಮಸ್ಯೆಯಿದ್ದರೆ ಮೆಸೇಜ್ ಸಂದೇಶ ಕಳುಹಿಸಿ ಎನ್ನುತ್ತಾರೆ ಎಂದು ದೂರಿದರು. ನಳಿನಿ ಆಚಾರ್ಯ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳು ಕಾರ್ಕಳಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಆದರೆ ಈ ಜಿಲ್ಲಾಧಿಕಾರಿಗಳು ಇತ್ತಾ ಮುಖವೇ ಮಾಡುತ್ತಿಲ್ಲ ಎಂದರು. ಮೊಹಮ್ಮದ್ ಶರೀಫ್ ಮಾತನಾಡಿ, ನಮ್ಮ ಸಿಬ್ಬಂದಿಗಳನ್ನು ಇನ್ನೊಂದು ಪುರಸಭೆಗೆ ನಿಯೋಜಿಸಿದರೆ, ನಮ್ಮಲ್ಲಿರುವ ಕೆಲಸವನ್ನು ಮಾಡುವವರಾರು ? ಎಂದು ಪ್ರಶ್ನಿಸಿದರು. ಮುಂದೆ ಅದಕ್ಕೆ ನಾವು ಸಹಮತಿಸುವುದಿಲ್ಲ ಎನ್ನುವ ನಿರ್ಣಯವನ್ನು ಈ ಸಂದರ್ಭ ಸಭೆಯಲ್ಲಿ ಕೈಗೊಳ್ಳಲಾಯಿತು.
ಕಳಪೆ ಕಾಮಗಾರಿ:
ಮಲ್ಲಿಗೆ ಓಣಿಯಲ್ಲಿ ಅಳವಡಿಸಿದ ಇಂಟರ್ ಲಾಕ್ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರರಿಗೆ ಬಿಲ್ಲು ಪಾವತಿಸಬೇಡಿ, ಜತೆಗೆ ಅದೇ ಗುತ್ತಿಗೆದಾರನಿಂದ ಮರು ಕಾಮಗಾರಿ ನಡೆಸಿಕೊಡಿ ಎಂದು ಶುಭದ ರಾವ್ ಮತ್ತು ಅಕ್ಷಯ್ ಮನವಿ ಮಾಡಿದರು. ಮಲ್ಲಿಗೆ ಓಣಿ ಕಾಮಗಾರಿಯ ವಿರುದ್ದ ಲಲಿತಾ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ ಮಾತನಾಡಿ, ಕಾಬೆಟ್ಟು ಬಳಿಯ ಸೇತುವೆಯ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಜನತೆಗೆ ತೊಂದರೆಯಾಗುತ್ತಿದೆ. ಅದನ್ನು ಕೇಳುವವರಿಲ್ಲವೇ ? ಎಂದು ಪ್ರಶ್ನಿಸಿದಾಗ, ವಿವೇಕಾನಂದ ಶೆಣೈ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸಿಕೊಂಡು ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.
ಬಾವಿ ಎಲ್ಲಿ...? : ಶಾಸಕ ನಿಧಿಯಿಂದ ಏಳು ಬಾವಿ ರಚನೆಯಾಗಿದೆ ಎಂದು ಪುರಸಭೆ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿದ್ದಾರೆ ಅದು ಎಲ್ಲಿ? ಎಂದು ಶುಭದ ರಾವ್, ಸುಭಿತ್ ಎನ್.ಆರ್ ಪ್ರಶ್ನಿಸಿದರು. ಪ್ರಕಾಶ್ ರಾವ್ ಮಾತನಾಡಿ, ಇಂಜಿನಿಯರ್ಗಳಲ್ಲಿ ವಿವರ ಕೇಳಿದರೆ ಮಾಹಿತಿ ಸಿಗುತ್ತದೆ ಎಂದರು. ಅಶ್ಪಕ್ಅಹ್ಮದ್ ಮಾತನಾಡಿ, ಬಾವಿ ರಚನೆಯ ವಿವರಗಳನ್ನು ಸಭೆಯ ಮುಂದಿಡುವಂತೆ ಒತ್ತಾಯಿಸಿದರು. ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಪುರಸಭೆಯ ಎಸ್ಎಫ್ಸಿ ಅನುದಾನ 60 ಲಕ್ಷ ರೂ. ವೆಚ್ಚದಲ್ಲಿ 5 ಬಾವಿಗಳ ರಚನೆಯಾಗುತ್ತಿದೆ. ಜತೆಗೆ ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್ಪೋರ್ಸ್ನಿಂದ ಬಂದ 20 ಲಕ್ಷ ಅನುದಾನದಲ್ಲಿ 5 ಕಡೆಗಳಲ್ಲಿ ಬಾವಿ ಮತ್ತು ಬೋರ್ವೆಲ್ ರಚನೆ ಮತ್ತು ಈ ಹಿಂದೆ ರಚನೆಯಾಗಿರುವ ಎರಡು ಭಾವಿಗಳಿಗೆ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಪೈಪ್ಲೈನ್ ಜೋಡಣೆ ಕಾಮಗಾರಿ ನಡೆಸಿದ್ದೇವೆ ಎನ್ನುವ ವಿವರವನ್ನು ಸಭೆಗೆ ನೀಡಿದರು.
ಇಂಟರ್ಲಾಕ್ ಅಳವಡಿಸಿ :
ಮಾರುಕಟ್ಟೆ ಬಳಿ ಉಚ್ಚಂಗಿ ಮಾರಿಯಮ್ಮನ ಮೇ.31ರಂದು ನಡೆಯಲಿದ್ದು, ದೇವರನ್ನು ಅಂದು ಪ್ರತಿಷ್ಠಾಪಿಸುವ ಜಾಗಕ್ಕೆ ಇಂಟರ್ಲಾಕ್ ಅಳವಡಿಸಿ. ಜತೆಗೆ ಮೂರು ದಿನ ಮನೆಗಳಿಗೆ ನಿರಂತರ ನೀರಿನ ಸೌಲಭ್ಯ ಕೊಡಿ ಎಂದು ಪ್ರತಿಮಾ ರಾಣೆ ಆಗ್ರಹಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಐನ್ನೂರು ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ಈ ರಣವೀರರ ಜಾತ್ರೆಯ ಪ್ರಯುಕ್ತ ಇಂಟರ್ಲಾಕ್ ಕಾಮಗಾರಿಗೆ 2 ಲಕ್ಷ ರೂ. ಕಾದಿರಿಸಿ, ಕೂಡಲೇ ಆ ಕಾಮಗಾರಿ ನಿರ್ವಹಿಸಿ ಕೊಡಿ ಎಂದರು. ಶಶಿಕಲಾ ರಾಣೆ ಮಾತನಾಡಿ, ಮಾರುಕಟ್ಟೆ ರಸ್ತೆ ಬಳಿಯಿರುವ ಹೊಂಡವನ್ನು ಸಮರ್ಪಕವಾಗಿ ಮುಚ್ಚಲಾಗಿಲ್ಲ ಎಂದು ದೂರಿದರು.
ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.







