"ಮುಸ್ಲಿಮರು ಬದಲಾಗುವುದಿಲ್ಲ, ಅವರಿಗೆ ಹೀಗೇ ಆಗಬೇಕು"
ಗುಜರಾತ್ ಹತ್ಯಾಕಾಂಡದ ತನಿಖಾ ಆಯೋಗದ ನ್ಯಾಯಾಧೀಶನ ಹೇಳಿಕೆ ಬಹಿರಂಗಪಡಿಸಿದ ರಾಜ್ ದೀಪ್
ಹೊಸದಿಲ್ಲಿ, ಮೇ 29: ಗುಜರಾತ್ ಹತ್ಯಾಕಾಂಡದ ತನಿಖಾ ಆಯೋಗದ ನ್ಯಾಯಾಧೀಶರೊಬ್ಬರು 2002ರಲ್ಲಿ ನಡೆದ ಸಮಾರಂಭವೊಂದರಲ್ಲಿ ನನ್ನ ಜನೆ ಮಾತನಾಡುತ್ತಾ, "ಮುಸ್ಲಿಮರು ಬದಲಾಗುವುದಿಲ್ಲ; ಅವರಿಗೆ ಹೀಗೇ ಆಗಬೇಕು" ಎಂದು ಹೇಳಿದ್ದಾಗಿ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಬಹಿರಂಗಪಡಿಸಿದ್ದಾರೆ.
ಇಂಡಿಯಾ ಟುಡೇ ಸಲಹಾ ಸಂಪಾದಕರಾಗಿರುವ ಸರ್ದೇಸಾಯಿ ಅವರು ಪತ್ರಕರ್ತ ರಾಣಾ ಅಯೂಬ್ ಅವರ ಹೊಸ ಕೃತಿ "ಗುಜರಾತ್ ಫೈಲ್ಸ್" ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಹೀಗೆ ಹೇಳಿದ್ದಾಗಿ ಜನಸತ್ತಾ ವರದಿ ಮಾಡಿದೆ. ಗುಜರಾತ್ ಗಲಭೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ಆ ನ್ಯಾಯಾಧೀಶರು ಹೀಗೆ ಹೇಳಿದ್ದರು ಎಂದು ಸರ್ದೇಸಾಯಿ ಸ್ಪಷ್ಟಪಡಿಸಿದರು.
ಇಂಥ ಹೇಳಿಕೆ ನೀಡಿದಾಗ ಅದನ್ನು ದಾಖಲಿಸಿಕೊಳ್ಳಲು ಕ್ಯಾಮೆರಾ ಇರಬೇಕಿತ್ತು ಎಂದು ನನಗೆ ಅನಿಸಿತು. ಒಂದು ಸಂದರ್ಭದಲ್ಲಿ ಈ ನ್ಯಾಯಾಧೀಶರನ್ನು ಕಾಂಗ್ರೆಸ್ ಸರ್ಕಾರ ತನಿಖಾ ಆಯೋಗದ ಮುಖ್ಯಸ್ಥರಾಗಿ ನೇಮಕ ಮಾಡಿತ್ತು. ಮತ್ತೊಂದು ಬಾರಿ ಬಿಜೆಪಿ ಅವರನ್ನು ನೇಮಕ ಮಾಡಿತ್ತು ಎಂದು ಬಹಿರಂಗಪಡಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಹರತೋಶ್ ಸಿಂಗ್ ಬಾಲ್, ಸುಪ್ರೀಂಕೋರ್ಟ್ ವಕೀಲರಾದ ಇಂದಿರಾ ಜೈಸಿಂಗ್ ಭಾಗವಹಿಸಿದ್ದರು.