ಕಲಾಭವನ್ ಮಣಿಯ ದೇಹದಲ್ಲಿ ವಿಷಮದ್ಯದ ಅಂಶವಿತ್ತು: ಹೈದರಾಬಾದ್ ಲ್ಯಾಬ್ನಲ್ಲಿ ಪತ್ತೆ
ತೃಶೂರ್, ಮೇ 29: ಮೃತರಾಗಿದ್ದ ಸಮಯದಲ್ಲಿ ಕಲಾಭವನ್ ಮಣಿ ದೇಹದಲ್ಲಿ ವಿಷಮದ್ಯದ ಅಂಶಗಳಿತ್ತು ಎಂದು ದೃಢಪಟ್ಟಿದೆ. ಹೈದರಾಬಾದ್ ಕೇಂದ್ರೀಯ ಫಾರೆನ್ಸಿಕ್ ಲ್ಯಾಬ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಣಿಯ ದೇಹದಲ್ಲಿ ಮಿಥೈಲ್ ಆಲ್ಕೊಹಾಲ್ ಅಂಶವಿದೆ ಎಂದು ಪತ್ತೆಹಚ್ಚಲಾಗಿದೆ. ಮಣಿ ಮೃತರಾಗುವ ಮೊದಲು ಮತ್ತು ನಂತರ ಅವರ ದೇಹದಿಂದ ಸಂಗ್ರಹಿಸಿದ್ದ ರಕ್ತದ ಸ್ಯಾಂಪಲ್, ಮೂತ್ರ ಹಾಗೂ ಆಂತರಿಕ ಅವಯವಗಳ ಸ್ಯಾಂಪಲ್ಗಳನ್ನು ಹೈದರಾಬಾದ್ ಕೇಂದ್ರೀಯ ಲ್ಯಾಬ್ಗೆ ಮರುಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಮಣಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ, ಅವರ ಸಾವಿನಲ್ಲಿ ನಿಗೂಢತೆಯಿದೆ ಎಂದು ಮಣಿಯ ಸಹೋದರ ಆರ್.ಎಲ್.ಪಿ. ರಾಮಕೃಷ್ಣನ್ ಆರೋಪಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದರು. ತನ್ನ ವಾದವನ್ನು ಈಗ ಹೈದರಾಬಾದ್ ಲ್ಯಾಬ್ ಫಲಿತಾಂಶ ಪುಷ್ಟೀಕರಿಸಿದೆ ಎಂದು ರಾಮಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ಫಾರೆನ್ಸಿಕ್ ಲ್ಯಾಬ್ನಿಂದ ಫಲಿತಾಂಶ ಸಿಗಲು ತಡವಾದ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ಕುಂಟುತ್ತಾ ಸಾಗಿತ್ತು. ಈ ಮೊದಲು ಕಾಕ್ಕನಾಡ್ ರೀಜನಲ್ ಲ್ಯಾಬ್ನಲ್ಲಿ ನಡೆಸಿದ ಆಂತರಿಕ ಅವಯವಗಳ ಪರೀಕ್ಷೆಯಲ್ಲಿ ಮೆಥನಾಲ್, ಕ್ಲೋರೋ ಪೆರಿಫೋಸ್ ಪತ್ತೆಯಾಗಿದ್ದರೂ ಮಣಿಯ ದೇಹದಲ್ಲಿ ಅವೆಷ್ಟು ಪ್ರಮಾಣದಲ್ಲಿ ಸೇರಿಕೊಂಡಿದೆ ಎಂದು ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಆಂತರಿಕ ಅವಯವಗಳನ್ನು ಹೈದರಾಬಾದ್ನ ಕೇಂದ್ರೀಯ ಲ್ಯಾಬ್ಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಫಾರೆನ್ಸಿಕ್ಸ್ ಪರೀಕ್ಷೆಯ ಫಲಿತಾಂಶ ದೊರಕಲು ವಿಳಂಬವಾದ್ದರಿಂದ ಕ್ರೈಂ ಬ್ರಾಂಚ್ ಎಸ್ಪಿ ಪಿ.ಎನ್. ಉಣ್ಣಿರಾಜರ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದಿಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಕಲಾಭವನ್ ಮಣಿ ಮಾರ್ಚ್ ಆರರಂದು ಮೃತರಾಗಿದ್ದು ಅಲ್ಲಿ ನಡೆಸಿದ್ದ ಆಂತರಿಕ ಅವಯವಗಳ ಪರೀಕ್ಷೆಯಲ್ಲಿ ಮಣಿಯ ದೇಹದಲ್ಲಿ ಮೆಥನಾಲ್ನ ಅಂಶ ಪತ್ತೆಹಚ್ಚಲಾಗಿತ್ತು. ಇದು ಅವರ ಸಾವಿನ ಕುರಿತು ಸಂದೇಹಗಳಿಗೆ ಆಸ್ಪದ ನೀಡಿತ್ತು. ಅಂದು ಅಲ್ಲಿನ ವೈದ್ಯರು ಮಣಿಯ ದೇಹದಲ್ಲಿ ಕೀಟನಾಶಕದ ಅಂಶ ಇದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಕೀಟನಾಶಕಗಳ ಅಂಶ ಹೇಗೆ ಮತ್ತು ಎಷ್ಟುಪ್ರಮಾಣದಲ್ಲಿ ಶರೀರಕ್ಕೆ ಸೇರಿಕೊಂಡಿದೆ ಎಂದು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ವ್ಯವಸ್ಥೆ ಕಾಕ್ಕನಾಟ್ ರೀಜನಲ್ ಲ್ಯಾಬ್ನಲ್ಲಿರಲಿಲ್ಲ. ಮಣಿಯ ಅಸಹಜ ರೀತಿಯಲ್ಲಿ ಮೃತರಾಗಿದ್ದಾರೆಂದು ಬೆಟ್ಟು ಮಾಡಿ ಮಣಿಯ ಸಹೋದರ ರಂಗಪ್ರವೇಶಿಸುವುದರೊಂದಿಗೆ ಸಾವಿನ ಕುರಿತ ಸಂದೇಹಗಳು ಹೆಚ್ಚು ಗಟ್ಟಿಯಾಗಿದ್ದವು. ಮಣಿಯ ಗೆಳೆಯರಲ್ಲಿ ತನಗೆ ಸಂದೇಹವಿದೆ. ತನ್ನ ಮನೆಯವರಿಂದ ದೂರವಿರುವಂತೆ ಮಣಿಯನ್ನು ಗೆಳೆಯರೇ ಪ್ರೇರೇಪಿಸಿದ್ದಾರೆಂದು ಮಣಿಯ ಸಹೋದರ ಆರೋಪಿಸಿದ್ದರು.