ಪೊಲೀಸ್ ವಾಹನದಲ್ಲೇ ಹೆರಿಗೆ: ಪೊಲೀಸರೇ ದಾದಿಯರು...
![ಪೊಲೀಸ್ ವಾಹನದಲ್ಲೇ ಹೆರಿಗೆ: ಪೊಲೀಸರೇ ದಾದಿಯರು... ಪೊಲೀಸ್ ವಾಹನದಲ್ಲೇ ಹೆರಿಗೆ: ಪೊಲೀಸರೇ ದಾದಿಯರು...](https://www.varthabharati.in/sites/default/files/images/articles/2016/05/30/52490415.jpg)
ಹೊಸದಿಲ್ಲಿ, ಮೇ 30: ಪಿಸಿಆರ್ ವಾಹನ ಪ್ರಸವ ಕೊಠಡಿಯಾಯಿತು. ಪೊಲೀಸರೇ ದಾದಿಯರಾದರು. 23 ವರ್ಷದ ಮಹಿಳೆ ಆರೋಗ್ಯವಂತ ಗಂಡುಮಗುವಿಗೆ ಜನ್ಮ ನೀಡಿದಳು. ಇದು ಸಿನಿಮಾ ಕಥೆಯಲ್ಲ. ನೈಜ ಘಟನೆ.
ತೀವ್ರ ಉದ್ವಿಗ್ನತೆಯ ಸ್ಥಿತಿ ನಿರ್ಮಾಣವಾದರೂ ಕೊನೆಗೆ ಘಟನೆ ಸುಖಾಂತ್ಯವಾಯಿತು. ಈ ಘಟನೆ ನಡೆದದ್ದು ರಾಜಧಾನಿ ದೆಹಲಿಯಲ್ಲಿ. ದಾದ್ರಿ ಎಕ್ಸ್ಪ್ರೆಸ್ ರೈಲಿನಲ್ಲಿ ಉತ್ತರ ಪ್ರದೇಶದ ಗ್ವಾಲಿಯರ್ನಿಂದ ಹರ್ಯಾಣದ ಸಮಲ್ಖಾ ಎಂಬಲ್ಲಿಗೆ ತೆರಳುತ್ತಿದ್ದ ಆರತಿ ಎಂಬ ಮಹಿಳೆಗೆ ಮುಂಜಾನೆ 5 ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಜತೆಗಿದ್ದ ಬಾವಂದಿರು ಟಿಕೆಟ್ ತಪಾಸಣೆಯವರ ನೆರವು ಕೋರಿದರು. ತಕ್ಷಣ ಅವರು ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದರು. ಅಲ್ಲಿಂದ ಪೊಲೀಸರಿಗೆ ಮಾಹಿತಿ ಹೋಯಿತು.
ತಕ್ಷಣ ದೆಹಲಿಯ ಸಬ್ಜಿಮಂಡಿ ಪ್ರದೇಶದಲ್ಲಿ ರೈಲು ನಿಲ್ಲಿಸಲು ಸೂಚಿಸಲಾಯಿತು. ಆ ವೇಳೆಗೆ ಆರತಿ ಹತಾಶರಾಗಿದ್ದರು. ಮಗುವಿನ ಸುತ್ತ ಇದ್ದ ನೀರಿನ ಪೊರೆ ಹರಿದುಕೊಂಡು ಇನ್ನೇನು ಪ್ರಸವ ಸಂಭವಿಸುತ್ತದೆ ಎಂಬ ಸ್ಥಿತಿ ಇತ್ತು. ಪಿಸಿಆರ್ ವಾಹನವನ್ನು ಪ್ಲಾಟ್ಫಾರಂಗೆ ತಂದು, ಆಕೆಯನ್ನು ರೈಲಿನಿಂದ ಕರೆ ತರಲಾಯಿತು. ಇಬ್ಬರು ಪೊಲೀಸರು ಸ್ಟ್ರೆಚರ್ ಮೂಲಕ ಆಕೆಯನ್ನು ವ್ಯಾನ್ಗೆ ಕರೆತಂದರು. ವಾಹನ ಪ್ರವೇಶಿಸುತ್ತಿದ್ದಂತೆ ಮಹಿಳೆಗೆ ಹೆರಿಗೆಯಾಯಿತು. ಪೊಲೀಸರು ಟವೆಲ್ ಹಾಗೂ ನವಜಾತ ಶಿಶುವಿಗೆ ಬಿಸಿನೀರಿನ ವ್ಯವಸ್ಥೆ ಮಾಡಿದರು. ಈ ಗಂಡುಮಗುವಿಗೆ ಪ್ರಯಾಣ ಎಂಬ ಹೆಸರಿಡುವುದಾಗಿ ಸಂಬಂಧಿಕರು ಹೇಳಿದ್ದಾರೆ.
ರೈಲಿನಲ್ಲಿ ಯಾವ ವೈದ್ಯಕೀಯ ನೆರವೂ ದೊರೆಯದೇ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ಆದರೆ ಪಿಸಿಆರ್ ವ್ಯಾನ್ ಸಮಯಕ್ಕೆ ಸರಿಯಾಗಿ ಬಂದು ಪೊಲೀಸರ ನೆರವಿನಿಂದ ಎಲ್ಲವೂ ಸುಖಾಂತ್ಯವಾಯಿತು ಎಂದು ಆರತಿಯ ಮಾವ ಕಾಶಿರಾಂ ಹೇಳಿದರು. ಬಳಿಕ ಮಹಿಳೆ ಹಾಗೂ ನವಜಾತ ಶಿಶುವನ್ನು ಹಿಂದೂರಾವ್ ಆಸ್ಪತ್ರೆಗೆ ಸಾಗಿಸಲಾಯಿತು. ತಾಯಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದು ಆರತಿಯವರಿಗೆ ಎರಡನೇ ಹೆರಿಗೆ. ಸಮಯಪ್ರಜ್ಞೆ ಮೆರೆದ ಇಬ್ಬರು ಪೊಲೀಸರಿಗೆ ವಿಶೇಷ ಆಯುಕ್ತ ಸಂಜಯ್ ಬೆನಿವಾಲ್ ನಗದು ಬಹುಮಾನ ಘೋಷಿಸಿದ್ದಾರೆ.