ಅಮಾಸೆಬೈಲು: ಜೂನ್1ರಂದು ಸೋಲಾರ್ದೀಪ ಉದ್ಘಾಟನೆ
ಉಡುಪಿ, ಮೇ 30: ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ಸೋಲಾರ್ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣೆ ಜೂ.1ರಂದು ನಡೆಯಲಿದೆ ಎಂದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎ.ಜಿ.ಕೊಡ್ಗಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಸೆಬೈಲು ಗ್ರಾಪಂನ್ನು ಸೋಲಾರ್ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮದ 1,497 ಮನೆಗಳಿಗೆ ಹಾಗೂ ಗ್ರಾಮದಲ್ಲಿ 20 ಸೋಲಾರ್ ದಾರಿ ದೀಪಗಳನ್ನು ಅಳವಡಿಸುವ ಯೋಜನೆಗೆ ಮಂಜೂರಾತಿ ದೊರಕಿದ್ದು, ಇದೀಗ ಈ ಕಾರ್ಯಕ್ಕೆ ಜೂ.1ರಂದು ಚಾಲನೆ ನೀಡಲಾಗುವುದು ಎಂದರು.
ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್ಆರ್ಇ)ಯಿಂದ ಶೇ.30, ರಾಜ್ಯದ ಕರ್ನಾಟಕನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್ಇಡಿಎಲ್)ನಿಂದ ಶೇ.20, ನಕ್ಸಲ್ ಪೀಡಿತ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ಹಾಗೂ ಫಲಾನುಭವಿಗಳ ವಂತಿಗೆಯೊಂದಿಗೆ ಈ ಯೋಜನೆಯನ್ನು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅನುಷ್ಠಾನಗೊಳಿಸಲಿದೆ ಎಂದರು.
ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳ 1497 ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸುವ ಗುರಿ ಇದೆ. ಇ-ಟೆಂಡರ್ನಲ್ಲಿ ಬೆಂಗಳೂರಿನ ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿ. ಈ ಗುತ್ತಿಗೆಯನ್ನು ವಹಿಸಿಕೊಂಡಿದೆ. ಇದರಂತೆ ಪ್ರತಿ ಮನೆಗೆ 2 ದೀಪಗಳಿಗೆ 9,900ರೂ., 4 ದೀಪಗಳಿಗೆ 16,000ರೂ. ಹಾಗೂ ದಾರಿದೀಪಗಳಿಗೆ 23,500 ದರವನ್ನು ನಿಗದಿ ಪಡಿಸಿದ್ದು, ಐದು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ಮಾಡಲು ಒಪ್ಪಿಕೊಂಡಿದೆ ಎಂದರು.
ಒಟ್ಟು ಯೋಜನೆಯ ವೆಚ್ಚ 2.13ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ 1.31 ಕೋಟಿ ರೂ., ಫಲಾನುಭವಿಗಳಿಂದ ಒಟ್ಟು 77 ಲಕ್ಷ ರೂ. (2 ದೀಪಕ್ಕೆ 3,000ರೂ., 4 ದೀಪಕ್ಕೆ 6,000ರೂ., ದಾರಿ ದೀಪಕ್ಕೆ ಪಂಚಾಯತ್ನಿಂದ) ಸಂಗ್ರಹದ ಗುರಿ ಇದೆ. ಉಳಿದ ಹಣವನ್ನು ಟ್ರಸ್ಟ್ ಭರಿಸಲಿದೆ ಎಂದು ಕೊಡ್ಗಿ ನುಡಿದರು.
ಜೂ.1ರಂದು ಬೆಳಗ್ಗೆ 10:00 ಗಂಟೆಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರ್ಯಕ್ರಮ ಹಾಗೂ ಸೋಲಾರ್ ದೀಪವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಕೃಷಿ ಮಾರುಕಟ್ಟೆಯನ್ನು, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮೀನು ಮಾರುಕಟ್ಟೆ ಪ್ರಾಂಗಣ, ಮೂಡಬಿದ್ರೆಯ ಡಾ.ಮೋಹನ ಆಳ್ವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ಹಾಗೂ ಪ್ರೋತ್ಸಾಹಧನ, ಕರ್ಣಾಟಕ ಬ್ಯಾಂಕ್ ಎಂಡಿ ಜಯರಾಮ ಭಟ್ ಪ್ರೌಢ ಶಾಲೆಯ ಶೌಚಾಲಯ, ಜಿಪಂ ಅಧ್ಯಕ್ಷ ದಿನಕರ ಕುಡಿಯುವ ನೀರು ಘಟಕವನ್ನು ಉದ್ಘಾಟಿಸುವರು. ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೆಲ್ಕೊದ ಜಗದೀಶ್ ಪೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮನೋಹರ ಪ್ರಸಾದ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ವ್ನಿೇಶ್ವರ ಉಡುಪ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.







