ಪೊಳ್ಳು ಭರವಸೆ ಕೇಳಿ ಶಿಕ್ಷಕರಿಗೂ ಬೇಸರವಾಗಿದೆ: ಸಚಿವ ದೇಶಪಾಂಡೆ
ಚುನಾವಣಾ ಪ್ರಚಾರ ಸಭೆ

ಕಾರವಾರ, ಮೇ 30: ಹೊರಟ್ಟಿಯವರ ಪೊಳ್ಳು ಭರವಸೆಗಳನ್ನು ಕೇಳಿ ಕೇಳಿ ಶಿಕ್ಷಕರಿಗೂ ಬೇಸರವಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಅವರ ಗೆಲುವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜೆಡಿಎಸ್ನ ಹಳೆ ತಲೆಗೆ ಈ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಈಶ್ವರ ಶಿಕ್ಷಕರ ಸಂಕಷ್ಟ ಅರಿತವರು. ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಿಕ್ಷಕರ ಪರ ಧ್ವನಿಯಾಗಲು ಅಣಿಯಾಗಿದ್ದಾರೆ ಎಂದರು.
ಅನುದಾನಿತ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ 4 ಇಂಜಿನಿಯರಿಂಗ್ ಕಾಲೇಜುಗಳಿಗೆ ನಮ್ಮ ಸರಕಾರ ತಲಾ 60ಕೋಟಿ ರೂ. ಅನುದಾನ ನೀಡಿದೆ. ಇದನ್ನೆಲ್ಲ ಮತದಾರರು ಗಮನಿಸುತ್ತಿದ್ದಾರೆ. ಯಾವ ಜನಪ್ರತಿನಿಧಿ ಎಷ್ಟು ಕೆಲಸ ಮಾಡಿದ್ದಾನೆ ಎಂಬುದನ್ನು ಮತದಾರರು ಅರಿತಿದ್ದಾರೆ. ಪೊಳ್ಳು ಭರವಸೆಗಳನ್ನು ನೀಡುತ್ತಿರುವವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ. ಈಶ್ವರ ಮಾತನಾಡಿ, ಪ್ರಾಧ್ಯಾಪಕನಾಗಿ ನಾನು ಹಲವಾರು ವರ್ಷ ಕೆಲಸ ಮಾಡಿದ್ದು, ಶಿಕ್ಷಕರ ಸಮಸ್ಯೆ ಏನೆಂದು ತಿಳಿದಿದ್ದೇನೆ. ಅರಣ್ಯ ನಿಗಮದ ಅಧ್ಯಕ್ಷನಾಗಿದ್ದಾಗ ಜಿಲ್ಲೆಯ ಪ್ರತಿ ಶಾಲೆಗಳಿಗೂ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಶಿಕ್ಷಕರು ನನ್ನ ಈ ಚುನಾವಣೆಯಲ್ಲಿ ಕೈಹಿಡಿಯುತ್ತಾರೆ ಎಂಬ ಭರವಸೆಯಿದೆ ಎಂದರು.
ಪರಿಷತ್ಗೆ ಆಯ್ಕೆಯಾದರೆ ಶಿಕ್ಷಕರಿಗಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಸರಕಾರಕ್ಕೆ ಶಿಕ್ಷಕರ ಪರಿಸ್ಥಿತಿ ಅರ್ಥಮಾಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರುತ್ತೇನೆ. ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ರಾಜಕಾರಣಿಗಳ ವರ್ತನೆಗಳಿಂದಾಗಿ ನಂಬಿಕೆ ಕಳೆದುಕೊಳ್ಳುವಂತೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಹುಸಿ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ, ಎಂಎಲ್ಸಿ ಎಸ್.ಎಲ್.ಘೋಟ್ನೇಕರ, ಪಕ್ಷದ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ ಉಪಸ್ಥಿತರಿದ್ದರು.







