ಬಂದವು ಅಚ್ಛೇ ದಿನ್...ದೂರವಾಣಿ,ಹೋಟೆಲೂಟ, ವಿಮಾನಯಾನ.....ಜೂನ್ 1ರಿಂದ ಎಲ್ಲವೂ ದುಬಾರಿ
ಹೊಸದಿಲ್ಲಿ,ಮೇ 31: ಬುಧವಾರದಿಂದ ನಿಮ್ಮ ದೂರವಾಣಿ ಮತ್ತು ಹೋಟೆಲ್ ಬಿಲ್ಗಳು,ವಿಮಾನಯಾನ ಟಿಕೆಟ್ಗಳು ಇತ್ಯಾದಿಗಳೆಲ್ಲ ನಿಮ್ಮ ಜೇಬುಗಳಿಗೆ ಇನ್ನಷ್ಟು ಕತ್ತರಿ ಹಾಕಲಿವೆ. ಇದೆಲ್ಲ ಹೊಸದಾಗಿ ಜಾರಿಗೊಳ್ಳುತ್ತಿರುವ ಶೇ.0.5 ಕೃಷಿ ಸೆಸ್(ಮೇಲ್ತೆರಿಗೆ)ನ ಪ್ರಭಾವ. ಇನ್ನು ತೆರಿಗೆಗೆ ಅರ್ಹ ಎಲ್ಲ ಸೇವೆಗಳಿಗೂ ಈಗಿನ ಶೇ.14.5ರ ಬದಲು ಶೇ.15 ತೆರಿಗೆ ಪಾವತಿಸುವುದು ಅನಿವಾರ್ಯ. ಈ ಕುರಿತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಮುಂಗಡಪತ್ರದಲ್ಲಿಯ ಪ್ರಸ್ತಾವನೆಗೆ ನಾಳೆಯೇ ಮುಹೂರ್ತ ನಿಗದಿಗೊಂಡಿದೆ.
ಪರೋಕ್ಷ ತೆರಿಗೆಗಳು ಮುಂಬರುವ ಹಣಕಾಸು ವರ್ಷದಲ್ಲಿ ಬಳಕೆದಾರರ ಮೇಲೆ 20,600 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನು ಹೇರಲಿವೆ ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ. ಆದರೆ ಜೂನ್ 1ರ ಮೊದಲು ತಯಾರಾದ ಮತ್ತು ಪಾವತಿಯಾಗಿರುವ ಬಿಲ್ಗಳಿಗೆ ಕೃಷಿ ಕಲ್ಯಾಣ ಸೆಸ್ ಅನ್ವಯಿಸುವುದಿಲ್ಲ. ಜೂ.1ರ ಮೊದಲು ತಯಾರಾದ...ಆದರೆ ಜೂ.1ರಿಂದ ಪಾವತಿಯಾಗುವ ಎಲ್ಲ ಬಿಲ್ಗಳು ಈ ಸೆಸ್ನ್ನು ಒಳಗೊಂಡಿರಲಿವೆ. ವ್ಯಾಟ್ ಮತ್ತು ಸೇವಾ ತೆರಿಗೆಗಳಿಗೆ ಅತಿರಿಕ್ತವಾಗಿ ಈ ಸೆಸ್ ಪಾವತಿಸಬೇಕಾಗುತ್ತದೆ.
ಈ ಹಿಂದೆ ಹೇರಲಾಗಿದ್ದ ಸ್ವಚ್ಛ ಭಾರತ ಸೆಸ್ನಂತೆ ಈ ಕೃಷಿ ಕಲ್ಯಾಣ ಸೆಸ್ ಕೂಡ ಸೇವಾ ತೆರಿಗೆ ಘಟಕದ ಮೇಲೆ ವಿಧಿಸಲಾಗುತ್ತಿಲ್ಲ, ಅದು ನೀವು ಪಡೆದುಕೊಳ್ಳುವ ಸೇವೆಯ ವೌಲ್ಯದ ಮೇಲೆ ವಿಧಿಸಲ್ಪಡುತ್ತದೆ.
ಸೆಸ್ನಿಂದ ಸಂಗ್ರಹವಾಗುವ ಸಂಪೂರ್ಣ ಹಣವನ್ನು ಕೃಷಿ ಸುಧಾರಣೆ ಮತ್ತಿ ಕೃಷಿಕರ ಅಭ್ಯುದಯಕ್ಕೆ ಸಂಬಂಧಿಸಿದ ಉಪಕ್ರಮಗಳಿಗೇ ಬಳಸಲಾಗುವುದು ಎಂದು ಜೇಟ್ಲಿ ಮುಂಗಡಪತ್ರ ಮಂಡನೆಯ ವೇಳೆ ತಿಳಿಸಿದ್ದರು.
ಋಣಾತ್ಮಕ ಪಟ್ಟಿಯಲ್ಲಿರುವ ಸೇವೆಗಳು ಮತ್ತು ವಿನಾಯಿತಿ ಹೊಂದಿರುವ 47 ಸೇವೆಗಳ ಮೇಲೆ ಕೃಷಿ ಕಲ್ಯಾಣ ಸೆಸ್ ವಿಧಿಸಲಾಗುವುದಿಲ್ಲ.
ಆದರೆ ಬಳಕೆದಾರರು ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳಬಹುದಾದ ಅಂಶಗಳೂ ಇವೆ. ಜೂ.1ರಿಂದ ಕಂಪ್ಯೂಟರೀಕೃತ ರಿಜರ್ವೇಷನ್ ಕೌಂಟರ್ಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಖರೀದಿಸಲಾಗುವ ಪ್ರತಿ ರೈಲ್ವೆ ಟಿಕೆಟ್ ಮೇಲಿನ 30 ರೂ.ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಆದರೆ ಆನ್ಲೈನ್ನಲ್ಲಿ ಪೇಮೆಂಟ್ ಗೇಟ್ವೇಗಳ ಮೂಲಕ ಕಾರ್ಡ್ ಬಳಸಿ ಖರೀದಿಸುವ ರೈಲ್ವೆ ಟಿಕೆಟ್ಗಳಿಗೆ ಸೇವಾ ತೆರಿಗೆ ವಿಧಿಸಲಾಗುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲ.
ಇದೇ ವೇಳೆ ಸರಕಾರವು ಎರಡು ಲಕ್ಷ ರೂ.ಗೂ ಅಧಿಕ ಚಿನ್ನಾಭರಣಗಳ ಖರೀದಿಗೆ ಮೂಲದಲ್ಲಿ ಶೇ.1ರಷ್ಟು ತೆರಿಗೆಯನ್ನು ಸಂಗ್ರಹಿಸುವ ತನ್ನ ಬಜೆಟ್ ಪ್ರಸ್ತಾವನೆಯನ್ನು ಹಿಂದೆಗೆದುಕೊಂಡಿದೆ.