ಮಾನಹಾನಿಯಾಗಿಲ್ಲ: ನ್ಯಾಯಾಲಯ
ಪ್ರಧಾನಿ ಮೋದಿಯನ್ನು ‘ಸೈಕೋಪಾತ್’ ಎಂದಿದ್ದ ಕೇಜ್ರಿವಾಲ್
ಹೊಸದಿಲ್ಲಿ,ಮೇ 31: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಹೇಡಿ’ ಮತ್ತು ‘ಮಾನಸಿಕ ವಿಕ್ಷಿಪ್ತ ’ಎಂದು ಬಣ್ಣಿಸುವ ಮೂಲಕ ಅವರ ಮಾನಹಾನಿಯನ್ನು ಮಾಡಿಲ್ಲ ಎಂದು ದಿಲ್ಲಿಯ ನ್ಯಾಯಾಲಯವೊಂದು ತೀರ್ಪು ನೀಡಿದೆ.
ಖಾಸಗಿ ಸಂಸ್ಥೆಗಳು ಗುತ್ತಿಗೆಗಳನ್ನು ಪಡೆದುಕೊಳ್ಳಲು ನೆರವಾಗಲು ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡು ಸರಕಾರಕ್ಕೆ ಅಪಾರ ನಷ್ಟವನ್ನುಂಟು ಮಾಡಿದ ಆರೋಪದಲ್ಲಿ ತನ್ನ ಹಿರಿಯ ಸಹಾಯಕನ ಮೇಲೆ ಸಿಬಿಐ ದಾಳಿ ನಡೆಸಿದ ಬಳಿಕ ಕಳೆದ ವರ್ಷದ ಡಿಸೆಂಬರ್ನಲ್ಲಿ ಕೇಜ್ರಿವಾಲ್ ಪ್ರಧಾನಿಯನ್ನು ಟೀಕಿಸಿ ಟ್ವೀಟ್ ಮಾಡಿದ್ದರು.
ಮಾನಹಾನಿ ಮತ್ತು ದೇಶದ್ರೋಹ ಹಾಗೂ ಪ್ರಧಾನಿ ವಿರುದ್ಧ ‘ದ್ವೇಷ ಮತ್ತು ನಿಂದನೆ’ಯನ್ನು ಪ್ರಚೋದಿಸಿದ್ದ ಆರೋಪದಲ್ಲಿ ದಿಲ್ಲಿಯ ನ್ಯಾಯವಾದಿ ಪ್ರದೀಪ್ ದ್ವಿವೇದಿ ಅವರು ಕೇಜ್ರಿವಾಲ ವಿರುದ್ಧ ಈ ಪ್ರಕರಣವನ್ನು ದಾಖಲಿಸಿದ್ದರು.
ದ್ವಿವೇದಿ ಟೀಕೆಯಿಂದ ಬಾಧಿತ ವ್ಯಕ್ತಿಯಲ್ಲ,ಹೀಗಾಗಿ ಅವರು ಕೇಜ್ರಿವಾಲ್ ವಿರುದ್ಧ ದಾವೆಯನ್ನು ಹೂಡುವಂತಿಲ್ಲ ಎಂದು ನ್ಯಾಯಾಲಯವು ಹೇಳಿದೆ.