ಅಲೇಕಳ ಸೈಯದ್ ಮದನಿ ಶಾಲೆಯಲ್ಲಿ 10ನೆ ತರಗತಿ ಆರಂಭ

ಉಳ್ಳಾಲ, ಜೂ.1: ಕೆಲವು ವರ್ಷಗಳಿಂದ ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಯಿಂದ ಸೊರಗಿದ್ದ ಶಾಲೆ ಕಳೆದ ಮೂರು ವರ್ಷಗಳಿಂದ ಚೇತರಿಕೆ ಕಂಡು ಈ ವರ್ಷದಿಂದ 10ನೆ ತರಗತಿ ಆರಂಭಿಸಲಾಗಿದೆ. ಪ್ರಥಮ ವರ್ಷವೇ ಉತ್ತಮ ಫಲಿತಾಂಶ ತರುವ ಮೂಲಕ ಸಂಸ್ಥೆಗೆ ಹೆಸರು ತಂದು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಎಂದು ಸಯ್ಯದ್ ಮದನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಬ್ದುಲ್ಲತೀಫ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಯ್ಯದ್ ಮದನಿ ದರ್ಗಾ ಅಧೀನದಲ್ಲಿ ಅಲೇಕಳದಲ್ಲಿ ನಡೆಸಲ್ಪಡುತ್ತಿರುವ ಹಝ್ರತ್ ಸಯ್ಯದ್ ಮದನಿ ಸಂಸ್ಥೆಯಲ್ಲಿ ಬುಧವಾರ ಎಲ್ಕೆಜಿ ಮತ್ತು 10ನೆ ತರಗತಿ ಆರಂಭೋತ್ಸವದಲ್ಲಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಗಳಲ್ಲಿ ಮುಂದಿದ್ದಾರೆ. ಕಳೆದ ವರ್ಷ ವಿಜ್ಞಾನ ಮಾದರಿಯಲ್ಲಿ ವಿದ್ಯಾರ್ಥಿನಿ ನಹನಾ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ. ಅದ್ಭುತ ಪ್ರತಿಭೆಗಳು ಶಾಲೆಯಲ್ಲಿದ್ದು ಪ್ರೋತ್ಸಾಹದ ಅವಶ್ಯಕತೆಯಿದೆ. ಹಲವು ಸಮಸ್ಯೆಗಳಿದ್ದರೂ ಎಲ್ಲವನ್ನೂ ದರ್ಗಾ ಆಡಳಿತ ಪರಿಹರಿಸುವ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ, ಶಾಲಾ ಸಂಚಾಲಕ ಫಾರೂಕ್ ಉಳ್ಳಾಲ್ ಮಾತನಾಡಿ, ಶೋಚನೀಯ ಸ್ಥಿತಿಯಲ್ಲಿದ್ದ ಶಾಲೆ ಇಂದು ಉತ್ತಮ ಮಟ್ಟದಲ್ಲಿದ್ದು ಮುಖ್ಯ ಶಿಕ್ಷಕಿ ಸಹಿತ ಎಲ್ಲರ ಸಹಕಾರ ಕಾರಣ. ಶಾಲೆಯಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಯೇ ಇದ್ದು ಪುರುಷರಿಗಿಂತಲೂ ಮುತುವರ್ಜಿ, ಕಾಳಜಿಯಿಂದ ಕಾರ್ಯ ನಿರ್ವಹಿಸಿದ ಫಲವಾಗಿ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಕಲಿತು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಹೇಳಿದರು.
ಈ ಸಂದರ್ಭ ದರ್ಗಾ ಅಧ್ಯಕ್ಷರಿಗೆ ಶಾಲೆ ವತಿಯಿಂದ ಸನ್ಮಾನಿಸಲು ಸಿದ್ಧತೆ ನಡೆದಾಗ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟ ಪ್ರವೇಶಿಸಿದ ವಿದ್ಯಾರ್ಥಿನಿ ನಹನಾಗೆ ಸನ್ಮಾನಿಸುವ ಮೂಲಕ ಅಧ್ಯಕ್ಷರು ಪ್ರೋತ್ಸಾಹಿಸಿದರು.
ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಎಲ್ಕೆಜಿ ಹಾಗೂ ಹತ್ತನೆ ತರಗತಿ ಕೊಠಡಿ ಉದ್ಘಾಟಿಸಿದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಶುಭ ಹಾರೈಸಿದರು. ಉಪಾಧ್ಯಕ್ಷ ಬಾವ ಮುಹಮ್ಮದ್, ಸದಸ್ಯರಾದ ಯು.ಎ.ಇಬ್ರಾಹಿಂ, ಆಸಿಫ್ ಅಬ್ದುಲ್ಲಾ, ಅಲೇಕಳ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಇಬ್ರಾಹಿಂ, ಮುಹಮ್ಮದ್ ಮುಖ್ಯ ಶಿಕ್ಷಕಿ ರಮ್ಲತ್, ಪ್ರಮುಖರಾದ ಆಲಿ ಮೋನು ಹಾಗೂ ಕಾರ್ಯನಿರ್ವಹಣಾಧಿಕಾರಿ ಶಿಹಾಬ್ ತಂಙಳ್ ಉಪಸ್ಥಿತರಿದ್ದರು. ಶಿಕ್ಷಕಿ ಶಮೀನ ಕಾರ್ಯಕ್ರಮ ನಿರೂಪಿಸಿದರು.







