ದಾಬೋಲ್ಕರ್ ಹತ್ಯೆ: ‘ಸನಾತನ’ ಕಾರ್ಯಕರ್ತ ಅಕೋಲ್ಕರ್ ನಿವಾಸದಲ್ಲಿ ಶೋಧ
ಹೊಸದಿಲ್ಲಿ,ಜೂ.1: ವಿಚಾರವಾದಿ ನರೇಂದ್ರ ದಾಬೋಲ್ಕರ್ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಬುಧವಾರ ಮಡ್ಗಾಂವ್ ಸ್ಫೋಟ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ‘ಸನಾತನ ಸಂಸ್ಥೆ’ಯ ಕಾರ್ಯಕರ್ತ ಸಾರಂಗ್ ಅಕೋಲ್ಕರ್ನ ಪುಣೆ ನಿವಾಸವನ್ನು ಶೋಧಿಸಿದೆ.
ಮೂಢನಂಬಿಕೆಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದ ಖ್ಯಾತ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ಪ್ರಮುಖ ಸಂಚುಗಾರರಲ್ಲಿ 34 ವರ್ಷ ವಯಸ್ಸಿನ ಅಕೋಲ್ಕರ್ ಕೂಡಾ ಒಬ್ಬನೆನ್ನಲಾಗಿದೆ. ದಾಬೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಅಕೋಲ್ಕರ್ ಸನಾತನ ಸಂಸ್ಥೆಯ ಜೊತೆ ನಂಟು ಹೊಂದಿದ್ದಾನೆಂದು ನಂಬಲಾಗಿದೆ. 2009ರ ಮಡ್ಗಾಂವ್ ಸ್ಫೋಟ ಪ್ರಕರಣದಲ್ಲಿ ಅಕೋಲ್ಕರ್ ಪಾತ್ರವಿರುವುದು ಎನ್ಐಎ ತನಿಖೆಯಿಂದ ಬೆಳಕಿಗೆ ಬಂದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. 2012ರಲ್ಲಿ ಅಕೋಲ್ಕರ್ನ ಬಂಧನಕ್ಕೆ ಎನ್ಐಎ ರೆಡ್ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತಾದರೂ, ಈ ತನಕವೂ ಆತ ಪತ್ತೆಯಾಗಿಲ್ಲ. ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಅಕೋಲ್ಕರ್ ನಿವಾಸವಲ್ಲದೆ, ಮುಂಬೈ ಸಮೀಪದ ಪನ್ವೇಲ್ನಲ್ಲಿರುವ ವೀರೇಂದರ ಸಿಗ್ ತಾವ್ಡೆ ಎಂಬಾತನ ಮನೆಯನ್ನೂ ಶೋಧಿಸಿರುವುದಾಗಿ ಸಿಬಿಐ ಮೂಲಗಳು ಹೇಳಿವೆ.
2009ರ ಅಕ್ಟೋಬರ್ 16ರಂದು ಗೋವಾದ ಮಡ್ಗಾಂವ್ನಲ್ಲಿ ದೀಪಾವಳಿ ಹಬ್ಬದ ಮುನ್ನಾ ದಿನ, ಸನಾತನ ಸಂಸ್ಥೆಯ ಇಬ್ಬರು ಕಾರ್ಯಕರ್ತರು ದ್ವಿಚಕ್ರವಾಹನವೊಂದರಲ್ಲಿ ಬಾಂಬನ್ನು ಕೊಂಡೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಅದು ಸ್ಫೋಟಿಸಿದ್ದರಿಂದ ಓರ್ವ ಮೃತಪಟ್ಟಿದ್ದ. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬಾತ ಆಸ್ಪತ್ರೆಯಲ್ಲಿ ಅಸುನೀಗಿದ್ದ. ಈ ಪ್ರಕರಣದ ಇತರ ಆರು ಆರೋಪಿಗಳನ್ನು ಎನ್ಐಎ ಆನಂತರ ದೋಷಮುಕ್ತಗೊಳಿಸಿತ್ತು. ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಈ ಸ್ಫೋಟ ಸಂಭವಿಸಿತ್ತು. ಸ್ಫೋಟ ಸಾಮಾಗ್ರಿಗಳ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲ್ಪಟ್ಟ ಈ ಆರು ಆರೋಪಿಗಳ ವಿರುದ್ಧ ತನಿಖೆ ನಡೆಸಲು ಎನ್ಐಎ ರಾಜ್ಯ ಸರಕಾರದ ಅನುಮತಿ ಪಡೆದಿರಲಿಲ್ಲವೆಂಬ ತಾಂತ್ರಿಕ ಕಾರಣದಿಂದಾಗಿ ವಿಶೇಷ ನ್ಯಾಯಾಲಯವು 2013ರ ಡಿಸೆಂಬರ್ನಲ್ಲಿ ಎನ್ಐಎನ ದೋಷಾರೋಪ ಪಟ್ಟಿಯನ್ನು ವಜಾಗೊಳಿಸಿತ್ತು. ಆನಂತರ ಎನ್ಐಎ ಸಲ್ಲಿಸಿದ ಮೇಲ್ಮನವಿಯು, ಬಾಂಬೆ ಹೈಕೋರ್ಟ್ನ ಗೋವಾ ಪೀಠದೆದುರು ವಿಚಾರಣೆಗೆ ಬಾಕಿಯುಳಿದಿದೆ.
ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಯಾವುದೇ ಪ್ರಗತಿಯಾಗಿಲ್ಲವೆಂದು ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ ಬಳಿಕ, ಬಾಂಬೆ ಹೈಕೋರ್ಟ್ 2014ರ ಮೇ 9ರಂದು ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ಗೆ ವರ್ಗಾಯಿಸಿತ್ತು.