ದಲಿತನ ಮನೆಯ ನೀರು ಕುಡಿಯಲು ಹಿಂಜರಿದ ಅಮಿತ್ ಶಾ
ಲಕ್ನೋ, ಜೂ.1: ಉತ್ತರ ಪ್ರದೇಶ ವಿಧಾನಸಬಾ ಚುನಾವಣೆಗೆ ಇನ್ನೂ ವರ್ಷವಿದೆ. ಆದರೆ ಬಿಜೆಪಿ 2014ರ ಲೋಕಸಭಾ ಚುನಾವಣೆಯ ಯಶಸ್ಸನ್ನು ಅನುಕರಿಸಲು ಕಸರತ್ತು ಆರಂಭಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಜಯಕ್ಕೆ ಕಾರಣರಾದವರು ಎನ್ನಲಾದ ಪಕ್ಷಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶವನ್ನು ಸವಾಲಾಗಿ ತೆಗೆದುಕೊಂಡಿದ್ದು, 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
ಪೂರ್ವಭಾವಿ ಸಿದ್ಧತೆಗೆ ಆಗಮಿಸಿದ ಶಾ, ಅಲಹಾಬಾದ್ನಲ್ಲಿ ರಾತ್ರಿ ತಂಗುವ ಕಾರ್ಯಕ್ರಮವಿತ್ತು. ಆದರೆ ಸ್ಥಳೀಯ ಕಾರ್ಯರ್ತರು ಅವರ ಭಾಷಣ ಆಲಿಸಲು ಉತ್ಸುಕರಾಗಿಲ್ಲ ಎಂದು ತಿಳಿದ ಬಳಿಕ ವಾರಣಾಸಿಗೆ ತೆರಳಿದರು. ದಲಿತರ ಮನೆಯಲ್ಲಿ ಊಟ ಮಾಡಲು ನಿರ್ಧರಿಸಿದರು. ಇದಕ್ಕೂ ಕಾರಣ ಸ್ಪಷ್ಟ. ಮೇಲ್ವರ್ಗದವರ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಪಕ್ಷದಿಂದ ದಲಿತ ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸುವುದು. ದಲಿತರ ಮನೆಯಲ್ಲಿ ಉಣ್ಣುವ ಚಿತ್ರವನ್ನೂ ಶಾ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಾಕಿದರು.
ಆದರೆ ಸಾಮಾಜಿಕ ಜಾಲತಾಣದ ಹದ್ದಿನ ಕಣ್ಣುಗಳು ಶಾ ಅವರ ಬೂಟಾಟಿಕೆಯನ್ನು ಬಹಿರಂಗಪಡಿಸಿದವು. ದಲಿತರ ಮನೆಯಲ್ಲಿ ಊಟ ಮಾಡಿದ ಅಮಿತ್ ಶಾ, ನೀರಿಗೆ ಮಾತ್ರ ಮಿನರಲ್ ವಾಟರ್ ಆಶ್ರಯಿಸಿದ್ದು, ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಇದರ ಜತೆಗೆ ವಾಟರ್ ಕೂಲರ್ ಬಳಸಿರುವ ಬಗ್ಗೆಯೂ ವರದಿಗಳು ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿವೆ. ರಾಹುಲ್ಗಾಂಧಿಯವರು 2014ರಲ್ಲಿ ಗುಜರಾತ್ ದಲಿತರ ಮನೆಗೆ ಊಟಕ್ಕೆ ಹೋದದ್ದನ್ನು ರಾಜಕೀಯ ಸ್ಟಂಟ್ ಎಂದು ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಟೀಕಿಸಿದ್ದರು. ಈಗ ಏನು ಹೇಳುತ್ತಾರೆ?