ಕೆರೆಗಳಲ್ಲಿ ಮೀನುಗಳ ಮಾರಣಹೋಮ!
ಮಾನ್ಯರೆ,
ಒಂದೊಮ್ಮೆ ಕೆರೆಗಳ ಬೀಡಾಗಿದ್ದ ಬೆಂಗಳೂರಲ್ಲೀಗ ಕೆರೆಗಳೇ ಮಾಯವಾಗುತ್ತಿವೆ. ಅಳಿದುಳಿದ ಕೆರೆಗಳಲ್ಲಿ ನೀರಿಲ್ಲದ ಕಾರಣ ಕೆರೆಗಳ ಜಲಜೀವರಾಶಿಗಳು ಕಂಟಕಗೊಳಗಾಗುತ್ತಿವೆ!
ಹಲಸೂರು ಕೆರೆ, ದೇವರ ಬೀಸನಹಳ್ಳಿ ಕೆರೆ ಬೆಂಗಳೂರಿನ ಪ್ರಸಿದ್ಧ ಕೆರೆಗಳು. ಈ ಕೆರೆಗಳಲ್ಲಿ ಈ ಹಿಂದೆ ಆಮ್ಲಜನಕದ ಕೊರತೆಯಿಂದ ಎರಡೆರಡು ಬಾರಿ ಮೀನುಗಳ ಮಾರಣಹೋಮ ನಡೆದಿತ್ತು. ಇದಕ್ಕೆ ಈಗ ಸೇರ್ಪಡೆ ಹೆಬ್ಬಾಳ ಕೆರೆ.
ಈ ಕೆರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ಇದಕ್ಕೆ ಕಾರಣ ರಾಜಕಾಲುವೆಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ನೀರು. ಈ ನೀರು ಕೆರೆಗಳಿಗೆ ಸೇರಿದ ಪರಿಣಾಮ ರಾಶಿಗಟ್ಟಲೆ ಮೀನುಗಳು ಸಾವನ್ನಪ್ಪಿವೆ. ಕೆರೆಗಳ ದಡದಲ್ಲಿ ಮೀನುಗಳು ರಾಶಿ-ರಾಶಿಯಾಗಿ ಬಿದ್ದಿವೆ. ಕೆಟ್ಟ ವಾಸನೆ ಬಡಿಯುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದಾಗ ಬಿಬಿಎಂಪಿ, ಮೀನುಗಾರಿಕಾ ಇಲಾಖೆ ಕಾಟಾಚಾರಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದವರು ನಾಪತ್ತೆಯಾಗಿದ್ದಾರೆ. ಆದ್ದರಿಂದ ಈ ಕೂಡಲೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಕೆರೆ ನೀರಿನ ಶುದ್ಧೀಕರಣಕ್ಕಾಗಿ ಕೆರೆ ಬಳಿ ಎಸ್ಟಿಪಿ ಸ್ಥಾಪಿಸಬೇಕಾಗಿದೆ.





