ಜಯಾರನ್ನು ಹೊಗಳಿದ್ದ ಮಧ್ಯ ಪ್ರದೇಶದ ಐಎಎಸ್ ಅಧಿಕಾರಿಗೆ ನೋಟಿಸ್
ಭೋಪಾಲ,ಜೂ.1: ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ವಿಜಯಕ್ಕಾಗಿ ಫೇಸ್ಬುಕ್ ಪೋಸ್ಟ್ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಅಭಿನಂದಿಸಿದ್ದಕ್ಕಾಗಿ ಐಎಎಸ್ ಅಧಿಕಾರಿಯಾಗಿರುವ ನರಸಿಂಗಪುರ ಜಿಲ್ಲಾಧಿಕಾರಿ ಸಿಬಿ ಚಕ್ರವರ್ತಿಯವರಿಗೆ ಮಧ್ಯಪ್ರದೇಶ ಸರಕಾರವು ಶೋಕಾಸ್ ನೋಟಿಸನ್ನು ಹೊರಡಿಸಿದೆ.
ಇತ್ತೀಚಿಗಷ್ಟೇ ಫೇಸ್ಬುಕ್ ಪೋಸ್ಟ್ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಹೊಗಳಿದ್ದಕ್ಕಾಗಿ ಬರ್ವಾನಿ ಜಿಲ್ಲಾಧಿಕಾರಿ ಅಜಯ್ ಸಿಂಗ್ ಗಂಗ್ವಾರ್ ಅವರನ್ನು ಎತ್ತಂಗಡಿಗೊಳಿಸಿದ್ದ ಸರಕಾರವು ಬಳಿಕ,ಫೇಸ್ಬುಕ್ ಪೋಸ್ಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಕ್ರಾಂತಿಯನ್ನು ಪ್ರತಿಪಾದಿಸಿದ್ದಕ್ಕಾಗಿ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಚಕ್ರವರ್ತಿ ಅವರು ಮೇ 19ರಂದು ತನ್ನ ಫೇಸ್ಬುಕ್ ಪುಟದಲ್ಲಿ ‘ಕಂಗ್ರಾಟ್ಸ್ ಅಮ್ಮಾ ’ಎಂದು ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಅದನ್ನು ತೆಗೆದು ಹಾಕಿದ್ದರು.
ತನಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಲು ಚಕ್ರವರ್ತಿ ನಿರಾಕರಿಸಿದರು.