ಇದು ಅರ್ಧ ನ್ಯಾಯ, ಹೋರಾಟ ಮುಗಿದಿಲ್ಲ : ಝಕಿಯಾ ಜಾಫ್ರಿ
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ

ನವದೆಹಲಿ : ಗೋಧ್ರಾ ಘಟನೆಯ ನಂತರ 2002ರಲ್ಲಿ ಗುಜರಾತಿನಲ್ಲಿ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ವಿಹಿಂಪ ನಾಯಕನೊಬ್ಬ ಸೇರಿದಂತೆ 24 ಮಂದಿಯನ್ನು ಅಪರಾಧಿಗಳೆಂದು ಅಹಮದಾಬಾದಿನ ವಿಶೇಷ ನ್ಯಾಯಾಲಯ ಗುರುವಾರ ತನ್ನ ತೀರ್ಪಿನಲ್ಲಿ ಘೋಷಿಸಿದ್ದು36 ಇತರ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಈ ಘಟನೆಯಲ್ಲಿ ಮೃತಪಟ್ಟ 69 ಮಂದಿಯಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರು ಒಬ್ಬರಾಗಿದ್ದರೆ, ಅವರ ಪತ್ನಿ ಝಕಿಯಾ ಜಾಫ್ರಿಗೆ ಈ ತೀರ್ಪು ಸಮಾಧಾನತಂದಿಲ್ಲ. ‘‘ಇದು ಅರ್ಧ ನ್ಯಾಯ, ನನ್ನ ಹೋರಾಟ ಮುಗಿದಿಲ್ಲ,’’ ಎಂದು ಅವರು ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ.
ತಾನು ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿಯೂ ಅವರು ಹೇಳಿದ್ದಾರೆ.
ದೋಷಮುಕ್ತಗೊಂಡವರಲ್ಲಿಹಾಲಿ ಬಿಜೆಪಿ ಕಾರ್ಪೊರೇಟರ್ ಬಿಪಿನ್ ಪಟೇಲ್ ಕೂಡ ಸೇರಿದ್ದಾರೆ. ಎಲ್ಲಾ ಆರೋಪಿಗಳು ಎದುರಿಸುತ್ತಿದ್ದ ಸಂಚಿನ ಆರೋಪವನ್ನೂ ಕೋರ್ಟ್ ಕೈಬಿಟ್ಟಿದ್ದು ಈ ಆರೋಪಕ್ಕೆಸೂಕ್ತ ಸಾಕ್ಷ್ಯಗಳಿಲ್ಲವೆಂದು ಹೇಳಿದೆ.
ನ್ಯಾಯಾಲಯ ದೋಷಿಗಳೆಂದು ಘೋಷಿಸಲ್ಪಟ್ಟವರಲ್ಲಿ11 ಮಂದಿಯ ಮೇಲೆ ಕೊಲೆ ಆರೋಪವಿದ್ದರೆ, ಉಳಿದ 13 ಮಂದಿ ಬೇರೆ ಅಪರಾಧಗಳಿಗೆ ದೋಷಿಗಳೆಂದು ಹೆಸರಿಸಲ್ಪಟ್ಟಿದ್ದಾರೆ. ಅವರೆಲ್ಲರಿಗೂನ್ಯಾಯಾಲಯ ಜೂನ್ 6ರಂದು ಶಿಕ್ಷೆಯ ಪ್ರಮಾಣಘೋಷಿಸಲಿದೆ.
ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಮೇ 31 ರಂದು ತೀರ್ಪು ನೀಡಬೇಕೆಂದು ಅದು ಅಹಮದಾಬಾದಿನ ವಿಶೇಷ ನ್ಯಾಯಾಲಯಕ್ಕೆಈ ಹಿಂದೆ ಸೂಚನೆ ನೀಡಿತ್ತು.ಈ ಪ್ರಕರಣದ 66 ಆರೋಪಿಗಳ ಪೈಕಿ 9 ಮಂದಿ ಜೈಲಿನಲ್ಲಿದ್ದರೆ, ಉಳಿದವರು ಈ ಹಿಂದೆಯೇ ಜಾಮೀನಿನ ಮೇಲೆ ಹೊರಬಂದಿದ್ದರು.
ಈ ಹತ್ಯಾಕಾಂಡವು ಪೂರ್ವ ನಿಯೋಜಿತವಾಗಿತ್ತಲ್ಲದೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿತ್ತೆಂದುಸಂತ್ರಸ್ತರ ಪರ ವಕೀಲರು ವಾದಿಸಿದ್ದರೆ ಪ್ರತಿವಾದಿ ವಕೀಲರು ಇದನ್ನು ನಿರಾಕರಿಸಿದ್ದರಲ್ಲದೆ, ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಹಲವಾರು ಸುತ್ತು ಗುಂಡು ಹಾರಿಸಿದ ನಂತರ ಗುಂಪೊಂದು ಹಿಂಸೆಗೆ ಕೈ ಹಾಕಿತ್ತೆಂದಿದ್ದಾರೆ.
ಗೋಧ್ರಾ ಘಟನೆ ನಡೆದ ಮರುದಿನವೇ, ಅಂದರೆ ಫೆಬ್ರವರಿ 28,2002 ರಂದು ಗುಲ್ಬರ್ಗ್ ಹತ್ಯಾಕಾಂಡ ನಡೆದಿತ್ತು.







