‘ಗರೀಬಿ ಹಟಾವೋ’ಘೋಷಣೆಯ ವಿರುದ್ಧ ಪ್ರಧಾನಿ ಮೋದಿ ದಾಳಿ
ಬಾಲಸೋರ(ಒಡಿಶಾ),ಜೂ.2: ಕಾಂಗ್ರೆಸ್ನ ‘ಗರೀಬಿ ಹಟಾವೋ’ ಘೋಷಣೆಯ ವಿರುದ್ಧ ಇಂದು ಇಲ್ಲಿ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಈ ಘೋಷಣೆಯನ್ನು ನೀಡಿದವರ ಉದ್ದೇಶ ಒಳ್ಳೆಯದೇ ಆಗಿದ್ದಿರಬಹುದಾದರೂ,ಅದನ್ನು ಪೂರೈಸಲು ಅವರು ಆಯ್ದುಕೊಂಡಿದ್ದ ದಾರಿ ತಪ್ಪಾಗಿತ್ತು ಎಂದು ಹೇಳಿದರು.
ತನ್ನ ಸರಕಾರವು ಎರಡು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದ ಅವರು,ದೇಶದಲ್ಲಿ ‘ಸಮತೋಲಿತ’ಅಭಿವೃದ್ಧಿಗೆ ಕರೆ ನೀಡಿದರಲ್ಲದೆ,ವಿಫುಲ ನೈಸರ್ಗಿಕ ಸಂಪನ್ಮೂಲಗಳಿದ್ದರೂ ದೇಶದ ಪೂರ್ವ ಭಾಗವು ಹಿಂದುಳಿದಿರುವ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದರು.
ಒಡಿಶಾ,ಪೂರ್ವ ಉತ್ತರ ಪ್ರದೇಶ,ಪಶ್ಚಿಮ ಬಂಗಾಲ,ಬಿಹಾರ ಮತ್ತು ಅಸ್ಸಾಮಗಳ ಅಭಿವೃದ್ಧಿಗೆ ಒತ್ತು ನೀಡಿದ ಅವರು,ತನ್ನ ಸರಕಾರವು ಬಡವರನ್ನು ಎಲ್ಲ ಯೋಜನೆಗಳ ಕೇಂದ್ರಬಿಂದುಗಳನ್ನಾಗಿಸುವ ಮೂಲಕ ಅವರ ಏಳಿಗೆಗೆ ಬದ್ಧವಾಗಿದೆ ಎಂದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ‘ಗರೀಬಿ ಹಟಾವೋ’ಘೋಷಣೆಯನ್ನು ಪ್ರಶ್ನಿಸಿದ ಅವರು,‘‘ಕಳೆದ 60 ವರ್ಷಗಳಿಂದಲೂ ಈ ಘೋಷಣೆಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಈ ಘೋಷಣೆಯನ್ನು ನೀಡಿದವರ ಉದ್ದೇಶವನ್ನು ನಾನು ಶಂಕಿಸುವುದಿಲ್ಲ. ಉದ್ದೇಶ ಒಳ್ಳೆಯಯದಾಗಿದ್ದಿರಬಹುದು. ಆದರೆ ಬಡತನ, ನಿರುದ್ಯೋಗ ಮತ್ತು ರೋಗಗಳು ಹೆಚ್ಚಾಗಿದ್ದರಿಂದ ಬಡತನ ನಿವಾರಣೆಗೆ ಅವರು ಆಯ್ದುಕೊಂಡಿದ್ದ ಮಾರ್ಗ ಖಂಡಿತವಾಗಿಯೂ ತಪ್ಪಾಗಿತ್ತು’’ ಎಂದು ಹೇಳಿದರು.
ಸರಕಾರಗಳು ಇರುವುದು ಬಡವರಿಗಾಗಿಯೇ ಹೊರತು ಶ್ರೀಮಂತರಿಗಾಗಿಯಲ್ಲ ಮತ್ತು ಅವು ಬಡತನದ ವಿರುದ್ಧ ಹೋರಾಡಬೇಕು. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವವರೆಗೂ ಬಡತನ ನಿವಾರಣೆಯಾಗದು ಎಂದು ಪ್ರಧಾನಿ ನುಡಿದರು.
‘‘ನನ್ನ ಸರಕಾರವು ದೇಶದ ಬಡಜನರ ಏಳಿಗೆಗೆ ಬದ್ಧವಾಗಿದೆ ಎಂದು ನಾನು ಹೇಳಿದ್ದೆ. ಹಾಗೆ ಹೇಳುವಾಗ ಯಾವುದೇ ರಾಜ್ಯ ಅಥವಾ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು ಸಮತೋಲಿತ ಅಭಿವೃದ್ಧಿಯಾಗಬೇಕು ಮತ್ತು ಪ್ರತಿಯೊಬ್ಬರಿಗೂ ಅದರ ಲಾಭ ದೊರೆಯಬೇಕು’’ ಎಂದು ಅವರು ಹೇಳಿದರು.