ಇನ್ನು ಪಾಕ್, ಬಾಂಗ್ಲಾ ಹಿಂದೂಗಳಿಗೆ ಭಾರತದ ನಾಗರಿಕರಾಗುವ ಅವಕಾಶ
ಹೊಸದಿಲ್ಲಿ, ಜೂ.3: ಭಾರತದ ಪೌರತ್ವ ಕಾನೂನಿಗೆ ತಿದ್ದುಪಡಿ ತಂದು, ಬಾಂಗ್ಲಾದೇಶಿ ಹಾಗೂ ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಮಾನವೀಯತೆ ಆಧಾರದಲ್ಲಿ ಪೌರತ್ವ ನೀಡಲಾಗುವುದು ಎಂದು ಹೇಳಲಾಗುತ್ತಿದ್ದರೂ, ಇದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಾಲಿ ಇರುವ ಕಾಯ್ದೆ ಅನ್ವಯ, ಧಾರ್ಮಿಕ ಭೀತಿ ಕಾರಣದಿಂದ ಈ ಎರಡು ದೇಶಗಳಿಂದ ಹಿಂದೂಗಳು ಭಾರತಕ್ಕೆ ಆಗಮಿಸಿದರೆ, ಅವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತಿತ್ತು. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಈ ವಲಸೆ ಕಾನೂನುಬದ್ಧವಾಗಲಿದೆ. ಹಿಂದೂ ಸಂರಕ್ಷಕ ಎಂಬ ಹಣೆಪಟ್ಟಿ ಹೊತ್ತಿರುವ ಪ್ರಧಾನಿ ನರೇಂದ್ರ ಸರ್ಕಾರ ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಇದರಿಂದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ 2 ಲಕ್ಷ ಹಿಂದೂಗಳಿಗೆ ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ಈ ದೇಶಗಳು ತಮ್ಮನ್ನು ದ್ವಿತೀಯ ದರ್ಜೆ ನಾಗರಿಕರೆಂದು ಪರಿಗಣಿಸಲಾಗುತ್ತಿದೆ ಎಂದು ಅಲ್ಲಿನ ಹಿಂದೂಗಳು ಆಪಾದಿಸುತ್ತಾರೆ.