ದಾರಿಗಾಗಿ ಜಗಳ : ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಂದ ಚಿಕ್ಕಪ್ಪನ ಕುಟುಂಬ!
ಪಿಲಿಬಿತ್, ಜೂನ್ 3: ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯಲ್ಲಿ ದಾರಿಯ ಕುರಿತು ವಿವಾದ ಭುಗಿಲೆದ್ದು ಎರಡು ಕುಟುಂಬಗಳ ಗುಂಪುಗಳೊಳಗೆ ಘರ್ಷಣೆ ನಡೆದಿದ್ದು ಒಬ್ಬ ಯುವಕನ್ನು ಲಾಠಿಯಿಂದ ಥಳಿಸಿ ಕೊಂದು ಹಾಕಿದ ಘಟನೆ ವರದಿಯಾಗಿದೆ. ಮೃತ ಯುವಕನ ತಂದೆ ಹಾಗೂ ಸಹೋದರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಪೂರನ್ಪುರ ಕೋತ್ವಾಲಿಯ ಭಗವಂತಪುರ ಗ್ರಾಮದಲ್ಲಿ ಗುಲ್ಫಾಮ್ ಎಂಬ ವ್ಯಕ್ತಿಗೂ ಆತನ ಚಿಕ್ಕಪ್ಪ ಹಸನೈನ್ಗೂ ಮನೆಯ ದಾರಿಯ ಕುರಿತು ವಿವಾದವಿತ್ತು. ಇದರ ಹಿನ್ನೆಲೆಯಲ್ಲಿ ಮೊನ್ನೆ ರಾತ್ರಿಯ ವೇಳೆ ಜಗಳ ಆರಂಭವಾಗಿತ್ತು.
ಜಗಳ ಅತಿರೇಕಕ್ಕೆ ಹೋಗಿದ್ದು ಹೊಡೆದಾಟವಾಗಿದೆ ಹಾಗೂ ಎರಡು ಕಡೆಯವರು ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಗುಲ್ಫಾಮ್, ಅವನ ತಂದೆ ಆಲಮ್ ಮತ್ತು ಸಹೋದರ ಮಾಸೂಮ್ ಶಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುಲ್ಫಾಮ್ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಲ್ಫಾಮ್ನ ಪತ್ನಿ ಗುಲ್ಫಾಮ್ನ ಚಿಕ್ಕಪ್ಪ ಹಸನೈನ್ ಸಹಿತ ಇತರ ಮೂವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಹಸನೈನ್ರನ್ನು ಬಂಧಿಸಿದ್ದು ಇತರ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.