ಎಹ್ಸಾನ್ ಜಾಫ್ರಿ ಬಳಿ ‘ನಿಮ್ಮನ್ನು ಇನ್ನೂ ಕೊಂದಿಲ್ಲವೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು ಸಿಎಂ ಮೋದಿ
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಬದುಕುಳಿದ ರೂಪಾಬೆಹ್ನ್ ಮೋದಿ ಆರೋಪ
![ಎಹ್ಸಾನ್ ಜಾಫ್ರಿ ಬಳಿ ‘ನಿಮ್ಮನ್ನು ಇನ್ನೂ ಕೊಂದಿಲ್ಲವೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು ಸಿಎಂ ಮೋದಿ ಎಹ್ಸಾನ್ ಜಾಫ್ರಿ ಬಳಿ ‘ನಿಮ್ಮನ್ನು ಇನ್ನೂ ಕೊಂದಿಲ್ಲವೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು ಸಿಎಂ ಮೋದಿ](https://www.varthabharati.in/sites/default/files/images/articles/2016/06/3/rupabehn-modi-lead--ncs-modified-20130820130119-maxw-640-imageversion-default-ar-312169954.jpg)
ಅಹಮದಾಬಾದ್ : ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವಾಗುವ ಮೊದಲು ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಲ್ಲಿ ಸಹಾಯಕ್ಕಾಗಿ ಅಂಗಲಾಚಿದೂರವಾಣಿ ಕರೆ ಮಾಡಿದರೂ ಮೋದಿ ‘ನೀವಿನ್ನೂ ಸತ್ತಿಲ್ಲವೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು, ಎಂದು ಆ ಭಯಾನಕ ದಿನವನ್ನು ನೆನಪಿಸುತ್ತಾರೆ ಹತ್ಯಾಕಾಂಡದಲ್ಲಿ ಬದುಕುಳಿದ ರೂಪಾಬೆಹ್ನ್ ಮೋದಿ. ಪಾರ್ಸಿಗಳಾಗಿದ್ದ ರೂಪಾ ಮತ್ತಾಕೆಯ ಮಕ್ಕಳು ಆ ದಿನ ಜಾಫ್ರಿ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಒಟ್ಟು 6 ಮಂದಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಕ್ಯಾಚ್ ನ್ಯೂಸ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘‘ನಾವು ಅವರೆಲ್ಲರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ್ದೇವೆ. ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ದೊರಕಿಸಲಾಗಿಲ್ಲ,’’ಎಂದು ಹೇಳಿದರು.
ಕೆ ಜಿ ಎರ್ದಾ ಎಂಬ ಹೆಸರಿನ ವ್ಯಕ್ತಿಯ ಖುಲಾಸೆಯ ಬಗ್ಗೆ ಕೇಳಿದಾಗ, ‘‘ಇದೇ ವ್ಯಕ್ತಿ ನನ್ನನ್ನು ನನ್ನ ಮಗಳು ಹಾಗೂ ಇತರ ಮೂವರನ್ನು ದಾಳಿಕೋರರ ಬಳಿ ಕೊಂಡೊಯ್ದು ನಾನು ತಂದಿದ್ದ ನನ್ನ ಮಗನ ಫೊಟೋವನ್ನು ಅವರಿಗೆತೋರಿಸಿ ‘‘ಈ ವ್ಯಕ್ತಿಯನ್ನು ನೀವು ಕೊಂದಿಲ್ಲವೇ?’’ಎಂದು ಕೇಳಿದಾಗ ಅವರಲ್ಲೊಬ್ಬ ಇಲ್ಲವೆಂದಿದ್ದ. ಅಷ್ಟೇ, ನಂತರ ನನ್ನ ಪುತ್ರನನ್ನು ನಾನು ನೋಡಿಲ್ಲ,’’ ಎಂದು ಅವರು ದುಃಖದಿಂದ ನುಡಿಯುತ್ತಾರೆ.
ಜಾಫ್ರಿಯವರನ್ನು ಗುಂಪೊಂದುಹೊರಗೆಳೆದು ಅವರ ಮೇಲೆ ಪೆಟ್ರೋಲ್ ಸುರಿದು ಅವರಿಗೆ ಬೆಂಕಿಯಿಕ್ಕಿದ್ದನ್ನು ರೂಪಾ ಕಣ್ಣಾರೆ ಕಂಡಿದ್ದರು. ಸುಮಾರು 4,500 ಮಂದಿಯಿದ್ದ ಗುಂಪು ನಡೆಸಿದ್ದ ದಾಳಿಯಲ್ಲಿ ರೂಪಾ ಮತ್ತಾಕೆಯ ಮಗಳು ಬದುಕುಳಿದಿದ್ದರು.
ಮೋದಿಯವರ ಬಗ್ಗೆ ಅಂದು ಹಾಗೂ ಈಗ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ‘‘ಆ ದಿನ ಎಹ್ಸಾನ್ ಜಾಫ್ರಿಯವರ ಫೋನ್ ಡೈರಿಯನ್ನು ನಾನು ಕೈಗೆತ್ತಿಕೊಂಡಿರಲಿಲ್ಲ. ಹಾಗೇನಾದರೂ ಮಾಡಿದ್ದಿದ್ದರೆಅವರು ಯಾರೊಂದಿಗೆಲ್ಲ ಸಂಪರ್ಕದಲ್ಲಿದ್ದರೆಂದು ತಿಳಿದು ಬರುತ್ತಿತ್ತು. ಜಾಫ್ರಿ ಯಾರೆಂದುತನಗೆ ಗೊತ್ತಿಲ್ಲವೆಂದು ಮೋದಿ ವಿಶೇಷ ತನಿಖಾ ದಳದ ಮುಂದೆ ಹೇಳುವ ಹಾಗಿರಲಿಲ್ಲ.ಘಟನೆ ನಡೆದ ತಿಂಗಳಲ್ಲೇ ಅವರಿಬ್ಬರು ಪ್ರಚಾರದಲ್ಲಿ ಭಾಗವಹಿಸಿದ್ದರು ಹಾಗೂ ಅವರ ಫೊಟೋಗಳು ದೈನಿಕಗಳಲ್ಲಿ ಅಚ್ಚಾಗಿದ್ದವು,’’ಎಂದು ನೆನಪಿಸಿಕೊಂಡರು.