ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಆಂಬುಲೆನ್ಸ್ ಪ್ರಾರಂಭಿಸಲು ಚಿಂತನೆ: ಸಚಿವ ಖಾದರ್
ಜುಬೈಲ್: ಎಂ.ಫ್ರೆಂಡ್ಸ್ ವತಿಯಿಂದ ಮೊಬೈಲ್ ಕ್ಲಿನಿಕ್ ಯೋಜನೆಯ ಪರಿಚಯ ಕಾರ್ಯಕ್ರಮ

ಜುಬೈಲ್, ಜೂ.3: ಸರಕಾರಿ ಆಸ್ಪತ್ರೆಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಸೌದಿ ಅರೇಬಿಯಾದ ಜುಬೈಲ್ ರಾಯಲ್ ಕಮಿಷನ್ನ ಗೋಲ್ಡನ್ ಫಿಶ್ ರೆಸ್ಟೋರೆಂಟ್ನಲ್ಲಿ ಎಂ.ಫ್ರೆಂಡ್ಸ್ ಮಂಗಳೂರು ವತಿಯಿಂದ ನಡೆದ ಮೊಬೈಲ್ ಕ್ಲಿನಿಕ್ ಪ್ರಾಜೆಕ್ಟ್ನ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಾಮಾಜಿಕ ತಾಣಗಳು ದುರುಪಯೋಗವಾಗುವ ಪ್ರಸ್ತುತ ಸನ್ನಿವೇಶದಲ್ಲಿ ಎಂ.ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ಕರಾವಳಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಸಂಚಲನ ಮೂಡಿಸಿದೆ ಎಂದು ಯು.ಟಿ. ಖಾದರ್ ಹೇಳಿದರು.
ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಮಾತನಾಡಿ, ಎಂ.ಫ್ರೆಂಡ್ಸ್ ಮೊಬೈಲ್ ಕ್ಲಿನಿಕ್ 50 ಲಕ್ಷ ರೂ.ಗಳ ಯೋಜನೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ ತಿಂಗಳಲ್ಲಿ 20 ಗ್ರಾಮಗಳಲ್ಲಿ ಆರೋಗ್ಯ ಶಿಬಿರವನ್ನು ನಡೆಸಲಿದೆ. ಇದರಲ್ಲಿ ಲ್ಯಾಬ್ ವ್ಯವಸ್ಥೆ ಮಾಡಲಾಗುವುದು. ಮೊಬೈಲ್ ಕ್ಲಿನಿಕ್ ಬಸ್ನ್ನು ಝಕರಿಯಾ ಬಜ್ಪೆ ಪ್ರಾಯೋಜಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಅಲ್ ಮುಝೈನ್ ಗ್ರೂಪ್ನ ಝಹೀರ್ ಝಕರಿಯಾ, ವೈಟ್ಸ್ಟೋನ್ ಗ್ರೂಪ್ ಸಿಇಓ ಬಿ.ಎಂ. ಶರೀಫ್, ಅಮಾಕೋ ಗ್ರೂಪ್ ಸಿಇಓ ಮುಹಮ್ಮದ್ ಆಸಿಫ್, ತಾಲಿಬ್ ಹುಸೈನ್ ಮುಬಾರಕ್ ಅಲ್ ಹಮ್ಮಾಸ್, ರಿಯಲ್ ಟೆಕ್ ಸಿಇಓ ಮುಹಮ್ಮದ್ ಇಸ್ಮಾಯೀಲ್ ಉಳ್ಳಾಲ, ದುಬೈ ಅಲ್ ಫಲಾಹ್ ಎಂ.ಡಿ. ಯೂಸುಫ್ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ತಾಹಿರ್ ಸಾಲ್ಮರ, ವಿ.ಎಚ್. ಅಶ್ರಫ್, ಝುಬೈರ್ ವಿಟ್ಲ, ಮುಸ್ತಫಾ ಇರುವೈಲ್, ರಿಫಾಯಿ ಕೊಡಿಪ್ಪಾಡಿ ಉಪಸ್ಥಿತರಿದ್ದರು.
ಯೂನುಸ್ ರಿಯಾದ್ ಸ್ವಾಗತಿಸಿದರು. ಫಾರೂಕ್ ಪೋರ್ಟ್ಫೋಲಿಯೋ ವಂದಿಸಿದರು. ಅಬೂಬಕರ್ ನೋಟರಿ ವಿಟ್ಲ ಹಾಗೂ ಇರ್ಶಾದ್ ಬೈರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.







