ನೂತನ ಶಿಕ್ಷಣ ನೀತಿ:ಸಚಿವೆ ಸ್ಮತಿ ಇರಾನಿ ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ನಡುವೆ ವಾಗ್ಯುದ್ಧ
![ನೂತನ ಶಿಕ್ಷಣ ನೀತಿ:ಸಚಿವೆ ಸ್ಮತಿ ಇರಾನಿ ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ನಡುವೆ ವಾಗ್ಯುದ್ಧ ನೂತನ ಶಿಕ್ಷಣ ನೀತಿ:ಸಚಿವೆ ಸ್ಮತಿ ಇರಾನಿ ಮತ್ತು ಮಾಜಿ ಸಂಪುಟ ಕಾರ್ಯದರ್ಶಿ ನಡುವೆ ವಾಗ್ಯುದ್ಧ](https://www.varthabharati.in/sites/default/files/images/articles/2016/06/3/irani-trs.jpg)
ಹೊಸದಿಲ್ಲಿ,ಜೂ.3: ನೂತನ ಶಿಕ್ಷಣ ನೀತಿ ಕುರಿತಂತೆ ತನ್ನ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಬಹಿರಂಗೊಳಿಸುವುದಾಗಿ ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್ಆರ್ ಸುಬ್ರಮಣಿಯನ್ ಅವರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ನಡುವೆ ವಾಗ್ಯುದ್ಧ ನಡೆದಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಸುಬ್ರಮಣಿಯನ್ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಶಿಫಾರಸುಗಳನ್ನೊಳಗೊಂಡಿರುವ ತನ್ನ ನೇತೃತ್ವದ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವಂತೆ ಕೋರಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದರು. ಇಲ್ಲದಿದ್ದರೆ ತಾನೇ ವರದಿಯನ್ನು ಬಹಿರಂಗಗೊಳಿಸುವುದಾಗಿ ಅವರು ಬೆದರಿಕೆಯನ್ನೂ ಒಡ್ಡಿದ್ದರೆನ್ನಲಾಗಿದೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನಿಯವರು,ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳನ್ನು ರಾಜ್ಯಗಳೊಂದಿಗೆ ಹಂಚಿಕೊಂಡ ಬಳಿಕವಷ್ಟೇ ಬಹಿರಂಗಗೊಳಿಸಲಾವುದು ಹೊರತು ಕೇವಲ ಮಾಧ್ಯಮಗಳಲ್ಲಿ ಸುದ್ದಿಯಾಗಲು ಅಲ್ಲ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಶಿಕ್ಷಣ ನೀತಿಯು ಪ್ರಚಾರವನ್ನು ಬಯಸುತ್ತಿರುವ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಯಾವುದೇ ಶಿಫಾರಸನ್ನು ಕರಡು ನೀತಿಯನ್ನಾಗಿಸುವ ಮುನ್ನ ತಮ್ಮಾಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ನಮ್ಮಲ್ಲಿ ವಿಶ್ವಾಸವಿಟ್ಟಿರುವ 1.10ಲ.ಗ್ರಾಮಗಳು, 500ಕ್ಕೂ ಅಧಿಕ ಬ್ಲಾಕ್ಗಳು, 500ಕ್ಕೂ ಅಧಿಕ ಜಿಲ್ಲೆಗಳು ಮತ್ತು 20ಕ್ಕೂ ಅಧಿಕ ರಾಜ್ಯಗಳ ಆಸ್ತಿಯಾಗಿದೆ ಎಂದು ಹೇಳಿದರು.