ಪೌರಸೇವಾ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರಕಾರಗಳು ವಿಫಲ: ರಾಮಚಂದ್ರ
ಪೌರ ಸೇವಾ ನೌಕರರ ಸಂಘದ ಪುನರುಜ್ಜೀವನ ಪೂರ್ವಭಾವಿ ಸಭೆ

ಚಿಕ್ಕಮಗಳೂರು, ಜೂ.5: ಪಪಂ, ಪುರಸಭೆ ಹಾಗೂ ನಗರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಸೇವಾ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರಗಳು ವಿಫಲವಾಗಿದ್ದು, ಸಮಸ್ಯೆಗಳು ಇತ್ಯರ್ಥವಾಗಲು ಸಂಘಟನಾತ್ಮಕವಾಗಿ ಸಧೃಡರಾಗಬೇಕಿದೆ ಎಂದು ಮೈಸೂರು ವಿಭಾಗದ ಮಾಜಿ ಉಪಾಧ್ಯಕ್ಷ ರಾಮಚಂದ್ರ ಕರೆ ನೀಡಿದ್ದಾರೆ.
ಅವರು ರವಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಪೌರಸೇವಾ ನೌಕರರ ಸಂಘದ ಪುನರುಜ್ಜೀವನಗೊಳಿಸುವ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪೌರಸೇವಾ ನೌಕರರು ಪರಸ್ಪರ ಒಗ್ಗಟ್ಟಿನಿಂದ ಸಂಘದಲ್ಲಿ ಕಾರ್ಯೋನ್ಮುಖರಾಗದಿದ್ದ ಸರಕಾರಗಳಾಗಲಿ ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಈ ಹಿಂದೆ ಜಿ.ಎಸ್.ಮಂಜುನಾಥ್ ಅಧ್ಯಕ್ಷರಾದ ಸಂದರ್ಭದಲ್ಲಿ ನೌಕರರ ಕೆಲವು ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು. ನಂತರದ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆ ಕುಂಠಿತವಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದರು.
ರಾಜ್ಯದಲ್ಲಿ ಸಂಘ ಸಧೃಡವಾಗದಿದ್ದಲ್ಲಿ ಯಾವುದೇ ಬೇಡಿಕೆಗಳು ಈಡೇರದು ಎಂಬುದನ್ನು ಮನಗಂಡು ಈ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಪಪಂ, ಪುರಸಭೆ ಹಾಗೂ ನಗರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಸೇವಾ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕು. ವೇತನ ತಾರತಮ್ಯ ಸರಿಪಡಿಸಬೇಕು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಸರಕಾರ ಈಡೇರಿಸಬೇಕು
ಎಂದು ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಪಿ.ಗುರುಮೂರ್ತಿ ಮಾತನಾಡಿ, ರಾಜ್ಯದಲ್ಲಿ 73ಸಾವಿರಕ್ಕೂ ಹೆಚ್ಚು ಜನ ಪಪಂ, ಪುರಸಭೆ ಹಾಗೂ ನಗರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರಿ ನೌಕರರಿಗೆ ಸಂಚಿತ ನಿಧಿಯಿಂದ ನೀಡುತ್ತಿರುವ ವೇತನದ ರೀತಿಯಲ್ಲೆೀ ಪೌರ ಸೇವಾ ನೌಕರರಿಗೂ ವೇತನ ಪಾವತಿಯಾಗುವಂತೆ ಆದೇಶ ನೀಡಬೇಕು. ರಾಜ್ಯದಲ್ಲಿ ಶೇ. 70ರಷ್ಟು ಪೌರ ಕಾರ್ಮಿಕರಿಗೆ ಸೂರಿಲ್ಲದೆ ಕಷ್ಟದಿಂದ ಜೀವನ ಮಾಡುತ್ತಿದ್ದಾರೆ ಎಂದರು.
ಸಮಸ್ಯೆಗಳು ಬಗೆಹರಿಯ ಬೇಕಾದರೆ ಸಂಘದಲ್ಲಿ ಒಗ್ಗಟ್ಟಿನ ಪ್ರದರ್ಶನ ಮುಖ್ಯ. ಇಂದಿನ ಸಭೆಯಲ್ಲಿ ರಾಜ್ಯದ ಮಂಡ್ಯ, ಕೆ.ಆರ್.ನಗರ, ಬೆಳಗಾಂ, ರಾಯಚೂರು, ಗದಗ್, ಹುಕ್ಕೇರಿ, ಮೈಸೂರು, ಹಾಸನ, ತರೀಕೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ನೂರಾರು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದೀರಿ. ಹಾಗಾಗಿ ಎಲ್ಲರೂ ಒಂದಾಗಿ ಸಂಘದ ಮೂಲಕ ಸರಕಾರದಿಂದ ಪೌರಸೇವಾ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಶ್ರಮಿಸೋಣ ಎಂದು ನುಡಿದರು.
ಮಾಜಿ ರಾಜ್ಯಾಧ್ಯಕ್ಷ ಕುಳ್ಳೇಗೌಡ, ಮೈಸೂರಿನ ಹೇಮಂತರಾಜ್, ನಾರಾಯಣ್, ಕರಿಗೌಡ, ರವೀಂದ್ರ ಶೆಟ್ಟಿ, ಬೇಲೂರು ಪುರಸಭಾ ಮುಖ್ಯಾಧಿಕಾರಿ ಬಸವರಾಜು, ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಕುಮಾರ್, ಪೌರಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಅಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಯ್ಡು, ಶಿವ ಪ್ರಸಾದ್ಭಟ್, ಹೇಮರಾಜು, ಸಿ.ಬಿ.ನಾಗರಾಜ್, ಕಾಂತರಾಜ್, ದೀಪಕ್, ಕೃಷ್ಣಮೂರ್ತಿ, ಶ್ರೀನಿವಾಸ್, ಎನ್.ಅಣ್ಣಯ್ಯ, ಸುನೀಲ್, ನಾಗರಾಜು, ವೆಂಕಟರಾಮು, ಆಂಜನೇಯ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.







