ಸಮಾಜಮುಖಿ ಕಾರ್ಯಗಳಿಂದ ಮನಸ್ಸಿನ ನೆಮ್ಮದಿ ವೃದ್ಧಿ: ಖ್ವಾಜಾಮುಹಿನುದ್ದೀನ್
ಸಫಾ ಬೈತುಲ್ಮಾಲ್ ಟ್ರಸ್ಟ್ನಿಂದ ಬಡವರಿಗೆ ಆಹಾರ ಧಾನ್ಯ ವಿತರಣೆ

ಚಿಕ್ಕಮಗಳೂರು, ಜೂ.5: ಪ್ರಾಮಾಣಿಕತೆ ಯಿಂದ ದುಡಿದು ನಮ್ಮ ಕೈಲಾದ ಮಟ್ಟಿಗೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿನ ನೆಮ್ಮದಿ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಖ್ವಾಜಾಮುಹಿನುದ್ದೀನ್ ತಿಳಿಸಿದ್ದಾರೆ.
ಅವರು ರವಿವಾರ ನಗರದ ಪುರ್ಖಾನಿಯಾ ಶಾದಿಮಹಲ್ನಲ್ಲಿ ರಮ್ಝಾನ್ ಅಂಗವಾಗಿ ಸಫಾ ಬೈತುಲ್ಮಾಲ್ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಧಾನ್ಯ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲ ದಾನಕ್ಕಿಂತ ಶ್ರೇಷ್ಠವಾದುದು ಅನ್ನದಾನ ಮತ್ತು ವಿದ್ಯಾದಾನ ಇವೆರಡನ್ನೂ ಪ್ರಾಮಾಣಿಕವಾಗಿ ಮಾಡಿದರೆ ಉಳಿದದ್ದು ತಾನಾಗಿಯೇ ಅರಸಿ ಬರುತ್ತದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಮನುಷ್ಯ ಒತ್ತಡದ ಬದುಕಿನಲ್ಲಿ ಸಿಲುಕುತ್ತಿದ್ದಾನೆ ಎಂದು ಹೇಳಿದರು.
ಟ್ರಸ್ಟ್ ಸದಸ್ಯ ಮುದಸ್ಸಿರ್ ರಶಾದಿ ಮಾತನಾಡಿ, 2010ರಲ್ಲಿ ಆರಂಭವಾದ ಸಂಸ್ಥೆಯು ಬಡವರು, ಅಸಹಾಯಕರು ಹಾಗೂ ಅಂಗವಿಕಲರು ಸೇರಿದಂತೆ ಜಾತಿ ಮತ ಭೇದ ತೊರೆದು ಎಲ್ಲ ವರ್ಗದವರಿಗೆ ಸಹಾಯ ಮಾಡುತ್ತಾ ಬಂದಿದೆ. ಕೆಲವರಿಗೆ ಹಬ್ಬವನ್ನು ಆಚರಿಸುವುದಕ್ಕೂ ಕಷ್ಟವಿರುವ ಜನರನ್ನು ನೋಡಿದ್ದೇವೆ. ಹಬ್ಬ ಹರಿದಿನಗಳು ಯಾರ ಸ್ವತ್ತಲ್ಲ ಅದು ಎಲ್ಲರಿಗೂ ಸಂತೋಷ ತರಬೇಕು ಎಂಬ ದೃಷ್ಟಿಯಿಂದ ರಮ್ಝಾನ್ ಮುನ್ನಾ ದಿನಗಳಲ್ಲಿ 200ಕ್ಕೂ ಹೆಚ್ಚು ಬಡವರಿಗೆ ಆಹಾರ ಧಾನ್ಯ ನೀಡುತ್ತಾ ಬಂದಿದ್ದೇವೆ ಎಂದರು.
ಸಮಾರಂಭದಲ್ಲಿ ರಾಹಿಖಾಸ್ಮಿ, ಅಶ್ರಫ್ ಅಲಿ, ಮುತುವಲ್ಲಿ ಮುಶ್ರಫ್, ಮಾಜಿ ಸಿಡಿಎ ಅಧ್ಯಕ್ಷ ಅತೀಕ್ಖೈಸರ್, ರಿಯಾಜ್, ಹಫೀಜ್, ಹಾಫಿಸ್ ಇರ್ಫಾನ್, ಹಾಫಿಸ್ ನೂರುಲ್ಲ, ಸಾಗಿರ್ಕುರೇಶಿ ಮತ್ತಿತರರು ಉಪಸ್ಥಿತರಿದ್ದರು.







