ಮುಂಡಗೋಡ: ಕೃಷಿ ವಿಮಾ ಕಂಪನಿ ವಿರುದ್ಧ ಪ್ರತಿಭಟನೆ

ಮುಂಡಗೋಡ, ಜೂ.7: ತಾಲೂಕಿನ ಬೆಳೆ ವಿಮೆ ನಿಗದಿಗೊಳಿಸುವ ಪದ್ದತಿಯಲ್ಲಿ ಕೃಷಿ ವಿಮಾ ಕಂಪನಿ ಕಾನೂನು ಬಾಹಿರವಾಗಿ ವಿಮೆ ನಿಗದಿಪಡಿಸಿ ರೈತರಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿ ಶಾಸಕ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿಯ ಬಸವೇಶ್ವರ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ವಿಮಾ ಕಂಪನಿ ವಿರುದ್ದ ಘೋಷಣೆ ಕೂಗುತ್ತ ಸಾಗಿತು. ಇಲ್ಲಿಯ ಶಿವಾಜಿ ವೃತ್ತ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಬಳಿಕ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
2015-16ನೆ ಸಾಲಿನಲ್ಲಿ ಮುಂಡಗೋಡ ತಾಲೂಕನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಸರಕಾರ ಘೋಷಣೆ ಮಾಡಿದ್ದು, ತೀವ್ರ ಬರಗಾಲದಿಂದ ಬಡ ರೈತ ಕುಟುಂಬಗಳು ತೊಂದರೆಗೊಳಗಾಗಿದ್ದು, ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ರೈತರು ಕೃಷಿ ವಿಮಾ ಕಂಪನಿಗಳ ಮೊರೆ ಹೋಗಿದ್ದರು. ಬೆಳೆ ವಿಮೆ ಬಗ್ಗೆ ತಾಲೂಕಾಡಳಿತ ಜಿಲ್ಲಾಡಳಿತದಿಂದ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ಜಿಲ್ಲಾ ಆಣೆವಾರು ವರದಿಯನ್ನು ನೀಡಲಾಗಿದ್ದರೂ ಕೇಂದ್ರ ಕೃಷಿ ವಿಮಾ ಕಂಪನಿ ಇದನ್ನು ನಿರ್ಲಕ್ಷಿಸಿ ರೈತರಿಗೆ ನ್ಯಾಯವಾಗಿ ಸಿಗಬೇಕಾದ ಪರಿಹಾರ ಸಿಗದಂತೆ ಮಾಡಿದ್ದು, ಈ ಕುರಿತು ಮುಂಡಗೋಡ ತಾಲೂಕಿನ ಎಲ್ಲ ರೈತರು ಜೊತೆಗೂಡಿ ಪಕ್ಷಾತೀತವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತರುವುದಕ್ಕಾಗಿ ಮುಂದಿನ ಎಲ್ಲ ಹೋರಾಟಕ್ಕೆ ಸಿದ್ದತೆ ಮಾಡಿಕೊಂಡು ತಾಲೂಕಿನ ವಿವಿದ ರೈತಪರ ಸಂಘಟನೆಗಳು ಸಾರ್ವಜನಿಕರು, ಸಂಘ ಸಂಸ್ಥೆ, ಜನಪ್ರತಿನಿಧಿಗಳು ಪ್ರತಿಭಟನಾ ರ್ಯಾಲಿ ನಡೆಸಿದ್ದೇವೆ.
ಮಾನ್ಯ ಪ್ರಧಾನಮಂತ್ರಿ, ರಾಜ್ಯಪಾಲರು ಮುಖ್ಯಮಂತ್ರಿಗಳು ಈ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ ತಾಲೂಕಿನ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕಾನೂನುಬದ್ಧವಾಗಿ ರೈತರಿಗೆ ಸಿಗಬೇಕಾದ ಬೆಳೆ ವಿಮೆಯನ್ನು ನೀಡಲು ಸಂಬಂಧಿಸಿದ ಕೇಂದ್ರ ಕೃಷಿ ವಿಮಾ ಕಂಪನಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ.
ತಾಲೂಕಿನ ಸುಮಾರು 8,954 ರೈತರಿಗೆ ಬೆಳೆ ವಿಮೆಗಾಗಿ 32.83 ಕೋಟಿ ರೂಪಾಯಿ ವಿಮೆಯನ್ನು ನೀಡುವ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಆದರೆ ವಿಮಾ ಕಂಪನಿ ತಾಲೂಕಿಗೆ ಕೇವಲ 6.43 ಕೋಟಿ ಮಾತ್ರ ನಿಗದಿಪಡಿಸಿದೆ. ಯಲ್ಲಾಪುರ ಹಾಗೂ ಶಿರಸಿ ತಾಲೂಕಿನ ಬನವಾಸಿ ಭಾಗದ ರೈತರಿಗೂ ಕೂಡ ಬೆಳೆ ವಿಮೆ ಮಂಜೂರಿನಲ್ಲಿ ತಾರತಮ್ಯ ತೋರಲಾಗಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಭತ್ತ ಪ್ರಧಾನ ಈ ತಾಲೂಕಿಗೆ ಕನಿಷ್ಠ 20 ಕೋಟಿ ರೂ. ವಿಮಾ ಹಣ ಬರಬೇಕಿತ್ತು. ಇದರ ಬದಲಾಗಿ 6 ಕೋಟಿಯಷ್ಟು ಹಣ ಬಂದಿರುವುದು ನಮ್ಮ ಕ್ಷೇತ್ರದ ದೌರ್ಭಾಗ್ಯವೇ ಸರಿ. ಇದರ ವಿರುದ್ದ ಪಕ್ಷಾತೀತವಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹಳಿಯಾಳ ತಾಲೂಕಿಗೆ ಸಿಕ್ಕಂತೆ ಮುಂಡಗೋಡ ತಾಲೂಕಿನ ರೈತರಿಗೇಕೆ ವಿಮೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದ ಅವರು, ಬೆಳೆ ವಿಮೆ ಮಂಜೂರಿಯಲ್ಲಿ ಕೇಂದ್ರ ವಿಮಾ ಕಂಪನಿಯಿಂದ ಸಂಪೂರ್ಣ ತಾರತಮ್ಯ ನಡೆದಿದೆ. ಈ ಬಗ್ಗೆ ಸ್ಥಳೀಯ ಸಂಸದರು ಕೇಂದ್ರ ಸಚಿವರೊಂದಿಗೆ ಚರ್ಚಿಸಿ ತಾರತಮ್ಯ ಸರಿಪಡಿಸುವ ಕೆಲಸ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗು ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಜಯಮ್ಮ ಹಿರೇಹಳ್ಳಿ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ, ಎ.ಪಿಎಮ್.ಸಿ ಅಧ್ಯಕ್ಷ ಎಮ್.ಬಿ.ಕುಟ್ರಿ, ಪ.ಪಂ ಅಧ್ಯಕ್ಷ ಮಹ್ಮದರಫೀಕ್ ಇನಾಮದಾರ, ಅಲ್ಲಿಖಾನ ಪಠಾಣ, ಮಹ್ಮದಗೌಸ ಮಕಾನದಾರ, ಚಿದಾನಂದ ಹರಿಜನ, ರಾಜಾಬೇಗ ಅಂಟಾಳ, ಸಿದ್ದಪ್ಪ ಹಡಪದ, ಕೃಷ್ಣ ಹಿರೇಹಳ್ಳಿ, ರಾಮಣ್ಣ ಪಾಲೇಕರ, ಲತೀಫ್ ನಾಲಬಂದ, ರಫೀಕ ಮಿರ್ಜಾನಕರ ಹನಮಂತ ಆರೇಗೊಪ್ಪ ಜೈನೋ ಬೆಂಡಿಗೇರಿ, ಗೋಪಾಲ ಪಾಟೀಲ,ನಿಂಗರಾಜ ಕನ್ನೂರ, ಆಸೀಫ್ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.







