ಬಿಪಿಎಲ್ ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಾವಕಾಶ ಕೋರಿ ಸಚಿವರಿಗೆ ಮನವಿ

ಮಡಿಕೇರಿ, ಜೂ.7: ಬಿಪಿಎಲ್ ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ ಲಗತ್ತಿಸುವ ಅವಧಿಯನ್ನು ಹೆಚ್ಚಿಸಬೇಕು ಎಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿದೆ.
ಬಿಪಿಎಲ್ ಕಾರ್ಡ್ದಾರರಿಗೆ ಆಧಾರ್ ಕಾರ್ಡ್ ನಂಬರನ್ನು ಲಗತ್ತಿಸಲು ಜೂ.15 ಕೊನೆ ದಿನ ಎಂದು ಗಡುವು ನೀಡಲಾಗಿದೆ. ಆದರೆ ಗ್ರಾಮೀಣ ಜನರು ಅನಕ್ಷರಸ್ಥರಾಗಿದ್ದು, ಕೂಲಿ ಕಾರ್ಮಿಕರಾಗಿರುವುದರಿಂದ ಅವರಿಗೆ ಮಾಹಿತಿಯ ಕೊರತೆಯಿದೆ. ಬಹುಕೇತ ಜನರು ಆಧಾರ್ ಕಾರ್ಡ್ನ್ನು ಹೊಂದಿರುವುದಿಲ್ಲ. ಈಗಲೂ ಸಹ ಆಧಾರ್ ಕಾರ್ಡ್ ನೋಂದಣಿ ನಡೆಯುತ್ತಿದೆ. ಆಧಾರ್ ಕಾರ್ಡ್ ನೋಂದಣಿ ಮಾಡುವ ಖಾಸಗಿ ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದು ಆಧಾರ್ ಕಾರ್ಡ್ ವಿತರಿಸಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಅಲ್ಲಿಯವರೆಗೆ ಅವಧಿಯನ್ನು ವಿಸ್ತರಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎ.ಎಸ್.ಕಟ್ಟಿ ಮಂದಯ್ಯ ಮನವಿ ಮಾಡಿದರು.
ವೀರಾಜಪೇಟೆ ತಾಲೂಕು ಮಿನಿ ವಿಧಾನಸೌಧದ ಕಾಮಗಾರಿಯೂ ಆಮೆಗತಿಯಲ್ಲಿ ನಡೆಯುತ್ತಿದ್ದು, ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು. ಸಮಿತಿಯ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಹಾಗೂ ಕಾರ್ಯದರ್ಶಿ ರಾಜು ನಂಜಪ್ಪ ಉಪಸ್ಥಿತರಿದ್ದರು.





