ಬಿಹಾರ ಇಂಟರ್ಮೀಡಿಯೇಟ್ ಪರೀಕ್ಷಾ ವಿವಾದ: ಸಿಟ್ ತನಿಖೆಗೆ ಸಿಎಂ ಆದೇಶ
![ಬಿಹಾರ ಇಂಟರ್ಮೀಡಿಯೇಟ್ ಪರೀಕ್ಷಾ ವಿವಾದ: ಸಿಟ್ ತನಿಖೆಗೆ ಸಿಎಂ ಆದೇಶ ಬಿಹಾರ ಇಂಟರ್ಮೀಡಿಯೇಟ್ ಪರೀಕ್ಷಾ ವಿವಾದ: ಸಿಟ್ ತನಿಖೆಗೆ ಸಿಎಂ ಆದೇಶ](https://www.varthabharati.in/sites/default/files/images/articles/2016/06/7/NitishKumar.gif)
ಪಾಟ್ನಾ, ಜೂ.7: ಬಿಹಾರದ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದವರ ಫಲಿತಾಂಶದ ವಿವಾದದ ಕುರಿತು ಕ್ರಿಮಿನಲ್ ಕೋನದಿಂದಲೂ ತನಿಖೆ ನಡೆಸಲಾಗುವುದೆಂಬ ಸೂಚನೆ ನೀಡಿದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಸಂಜೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯೊಂದನ್ನು ನಡೆಸಿದ್ದಾರೆ. ಸಂಪೂರ್ಣ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವೊಂದನ್ನು ರಚಿಸುವಂತೆ ಹಾಗೂ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಶೇಷ ತನಿಖಾ ತಂಡವು (ಸಿಟ್) 10 ದಿನಗಳೊಳಗಾಗಿ ರಾಜ್ಯದ ಪೊಲೀಸ್ ವರಿಷ್ಠ ಪಿ.ಕೆ.ಠಾಕೂರ್ಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ.
ಇಂಟರ್ಮೀಡಿಯೇಟ್ ಅಗ್ರ ಸ್ಥಾನಿಗಳ ಫಲಿತಾಂಶದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ತನಿಖೆಗಾಗಿ ಬಿಹಾರ ರಾಜ್ಯ ಶಿಕ್ಷಣ ಮಂಡಳಿಯು (ಬಿಎಸ್ಇಬಿ) ರಚಿಸಿದ್ದ ತ್ರಿ ಸದಸ್ಯ ನ್ಯಾಯಾಂಗ ಸಮಿತಿಯನ್ನು ಸರಕಾರ ಬರ್ಖಾಸ್ತುಗೊಳಿಸಿದೆ. ಪಾಟ್ನಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಘನಶ್ಯಾಂ ಪ್ರಸಾದ್ರ ನೇತೃತ್ವದಲ್ಲಿ ನಿವೃತ್ತ ನ್ಯಾಯಾಧೀಶ ಜಿ.ಪಿ.ಸಿನ್ಹಾ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಮಿಥು ಪ್ರಸಾದ್ರನ್ನೊಳಗೊಂಡಿದ್ದ ಸಮಿತಿ ಇದಾಗಿತ್ತು.
ಬಿಎಸ್ಇಬಿಗೆ ಅಂತಹ ಸಮಿತಿಯನ್ನು ರಚಿಸುವ ಅಧಿಕಾರವಿಲ್ಲ ಹಾಗೂ ಮಂಡಳಿಯ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ತನ್ನ ಮಿತಿಗಿಂತ ಆಚೆಗೆ ಕ್ರಮ ಕೈಗೊಂಡ ಬಗ್ಗೆ ಮುಖ್ಯಮಂತ್ರಿ ಅಸಮಾಧಾನಗೊಂಡಿದ್ದಾರೆಂದು ಹೇಳಿ ಸರಕಾರವು ಆ ಸಮಿತಿಯನ್ನು ಬರ್ಖಾಸ್ತು ಮಾಡಲು ನಿರ್ಧರಿಸಿತ್ತು.
ಫಲಿತಾಂಶ ವಿವಾದವನ್ನು ಸಮರ್ಥವಾಗಿ ನಿಭಾಯಿಸಿದ ಕಾರಣ ಸಿಂಗ್ರನ್ನು ಈಗಲ್ಲದಿದ್ದರೆ ಮತ್ತೆಯಾದರೂ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಯಿದೆಯೆಂಬ ವದಂತಿ ಹರಿದಿದೆ.
ಸರಕಾರ ನಿರ್ಧಾರ ಕೈಗೊಂಡೊಡನೆಯೇ ಉನ್ನತ ಸ್ಥಾನಿಗಳಾದ ರುಬಿ ರಾಯ್, ಸೌರಭ ಶ್ರೇಷ್ಠ ಹಾಗೂ ರಾಹುಲ್ ಕುಮಾರ್ ಎಂಬವರ ವಿರುದ್ಧ ಪಾಟ್ನಾದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಒಂದನ್ನು ದಾಖಲಿಸಲಾಗಿದೆ. ಹೆಚ್ಚಿನ ಉನ್ನತ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳು ಬಂದಿರುವ ವೈಶಾಲಿ ಜಿಲ್ಲೆಯ ವಿವಾದಿತ ವಿ.ಆರ್.ಕಾಲೇಜ್ನ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕ ರಾಜೀವ್ ಪ್ರಸಾದ್ ಸಿಂಗ್ ರಂಜನ್ರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆಯೆಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ.