ಪತ್ನಿಯನ್ನು ಹಿಂಸಿಸಿ ತೊರೆದರೇ ‘ಸೈರಾಟ್’ ನಿರ್ದೇಶಕ ಮಂಜುಳೆ?
ಮಾಜಿ ಪತ್ನಿಯಿಂದ ಗಂಭೀರ ಆರೋಪ
ಅಹ್ಮದಾಬಾದ್, ಜೂ. 8: ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗರಾಜ್ ಮಂಜುಳೆ ಅವರ ಲೇಟೆಸ್ಟ್ ಚಿತ್ರ ‘ಸೈರಾಟ್’ ವಿಮರ್ಶಕರಿಂದ ಭಾರೀ ಪ್ರಶಂಸೆಗಳನ್ನು ಪಡೆದು ಮಂಜುಳೆಯವರ ಖ್ಯಾತಿಗೆ ಇನ್ನೊಂದು ಗರಿ ಮೂಡಿಸಿದರೆ, ಅವರ ವೈಯಕ್ತಿಕ ಜೀವನ ಇದೀಗ ವಿವಾದಕ್ಕೆ ಕಾರಣವಾಗಿದೆ.
ಅವರ ಮಾಜಿ ಪತ್ನಿ ಸುನೀತಾ ಮಂಜುಳೆ ತನ್ನ ಗತ ಜೀವನದ ಸಂಕಷ್ಟಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದು, ತನ್ನ ಮಾಜಿ ಪತಿ ನಾಗರಾಜ್ ಅವರು ತಮ್ಮ ಚಿತ್ರಗಳಲ್ಲಿ ಬಿಂಬಿಸುವ ವಿಚಾರಗಳಿಗೂ ಅವರ ವೈಯಕ್ತಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂದಿದ್ದಾರೆ. ತನ್ನ ಪತಿ ತನಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆಂದು ಹೇಳುವ ಮಂಜುಳೆ, ತಾನು 1997ರಲ್ಲಿ ನಾಗರಾಜ್ರನ್ನು ವಿವಾಹವಾದಂದಿನಿಂದ ಅವರ ಕುಟುಂಬಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದೆನಾದರೂ ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ತನ್ನನ್ನು ಪತಿ ಹಾಗೂ ಆತನ ಕುಟುಂಬ ನಿರ್ಲಕ್ಷಿಸಿದೆಯೆಂದು ಆಪಾದಿಸಿದ್ದಾರೆ.
ಮಾದರಿ ಸೊಸೆಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿದ ಹೊರತಾಗಿಯೂ ತನ್ನ ಪತಿಯ ಪ್ರಥಮ ಚಿತ್ರ ಪಿಸ್ತುಲ್ಯಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ ಸಂದರ್ಭ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಇಡೀ ಕುಟುಂಬವೇ ದೆಹಲಿಗೆ ಪ್ರಯಾಣಿಸಿದರೂ ತನ್ನನ್ನು ಮನೆಯೊಳಗೆ ಕೂಡಿ ಹಾಕಿ ಹೋಗಲಾಗಿತ್ತು ಎಂದವರು ಆರೋಪಿಸಿದ್ದಾರೆ. ತನ್ನ ಪತಿ ತನಗೆ ಸುಂದರ ಬದುಕಿನ ಹಲವಾರು ಭರವಸೆ ನೀಡಿದ್ದರೂ ಅವರಿಗೆ ಖ್ಯಾತಿ ಹಾಗೂ ಹೆಸರು ಬಂದಾಗ ಭರವಸೆಗಳನ್ನೆಲ್ಲಾ ಮರೆತು ತನ್ನನ್ನು ಯಾವುದೋ ದಾಖಲೆಗಳಿಗೆ ಸಹಿ ಹಾಕುವಂತೆ ಮಾಡಿ 7 ಲಕ್ಷ ರೂ. ಜೀವನಾಂಶ ನೀಡಿ ತನ್ನಿಂದ ಕೈತೊಳೆದುಕೊಂಡಿದ್ದರು ಎಂದು ಆಕೆ ಆಪಾದಿಸಿದ್ದಾರೆ.
ಉತ್ತಮ ಚಿತ್ರ ನಿರ್ಮಿಸಿ ಖ್ಯಾತಿ ಪಡೆಯುವುದೇ ತನ್ನ ಗುರಿಯೆಂದು ಹೇಳಿಕೊಂಡ ಪತಿ ತನಗೆ ಕನಿಷ್ಠ ಮೂರು ಬಾರಿ ಬಲವಂತದಿಂದ ಅಬಾರ್ಷನ್ ಮಾಡಿಸಿದ್ದಾರೆಂದೂ ಆಕೆ ದೂರಿದ್ದಾರೆ.
ಪ್ರಸಕ್ತ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುವ ಸುನೀತಾ ಜೀವನೋಪಾಯಕ್ಕಾಗಿ ಇತರರ ಮನೆಗೆಲಸ ನಿರ್ವಹಿಸುತ್ತಿದ್ದು, ತನ್ನ ಪತಿ ಖ್ಯಾತಿಯ ಉತ್ತುಂಗಕ್ಕೇರಿದಾಗ ಕೇವಲ 8ನೆ ತರಗತಿ ಕಲಿತಿರುವ ತನ್ನನ್ನು ಅವರ ಪತ್ನಿಯೆಂದು ಎಲ್ಲರೆದುರು ಒಪ್ಪಿಕೊಳ್ಳಲು ಹಿಂಜರಿದಿರುವುದೇ ತನ್ನ ಈಗಿನ ಪರಿಸ್ಥಿತಿಗೆ ಕಾರಣವೆಂದು ಹೇಳಿದ್ದಾರೆ.