ಮದ್ಯಪಾನ ತಡೆಗೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು, ಜೂ.8: ಇಂದಿರಾನಗರ ಗ್ರಾಮದಲ್ಲಿ ಹಲವು ವರ್ಷಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕೈಮರ ಬಳಿಯ ಇಂದಿರಾ ನಗರದ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪೊಲೀಸರು ತಿಂಗಳಿಗೊಮ್ಮೆ ಬಂದು ಮದ್ಯ ಮಾರಾಟದ ಅಂಗಡಿ ಮಾಲಕರಿಂದ ಹಣ ಪಡೆದು ಹೋಗುತ್ತಿದ್ದಾರೆ. ಮದ್ಯ ಮಾರಾಟ ಅಕ್ರಮವಾಗಿರುವುದರಿಂದ ಉತ್ತಮ ಗುಣಮಟ್ಟದ್ದಾಗಿಲ್ಲ. ಈ ಮದ್ಯವನ್ನು ಸೇವಿಸಿದವರು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅಂಗಡಿ ಮಾಲಕರನ್ನು ವಿಚಾರಿಸಿದರೆ ಅವರು ಗ್ರಾಮಸ್ಥರ ಮೇಲೆಯೇ ದೌರ್ಜನ್ಯವೆಸಗುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗುರುವೇಶ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಮಲಾ, ರೇಖಾ, ಸುಶೀಲಾ, ಸುಮಿತ್ರಾ, ಮಂಜುಳಾ, ಸರಸ್ವತಿ, ಸುನಂದಾ, ರಾಧಾ, ಕಮಲಮ್ಮ, ಶಿವಮ್ಮ, ಕವಿತಾ, ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
Next Story





