ಗಂಡಿಬಾಗಿಲು ಶಾಲಾ ಎಸ್ಡಿಎಂಸಿ, ಪೋಷಕರ ಸಭೆ
ಉಪ್ಪಿನಂಗಡಿ, ಜೂ.9: ಸರಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆಯು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಬಡ್ಡಮೆ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಶೇಖರ್ ಅತ್ನಿ 2016-17ನೆ ಸಾಲಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಯ ಹೆಸರು, ತಂದೆ, ತಾಯಿಯ ಹೆಸರು, ವಿದ್ಯಾರ್ಥಿಯ ಜನ್ಮ ದಿನಾಂಕ, ಶಾಶ್ವತ ವಿಳಾಸವನ್ನು ಸರಿಯಾಗಿ, ಸ್ಪಷ್ಟವಾಗಿ ಪರಿಶೀಲಿಸಿ ನೀಡಬೇಕು, ಮುಂದೆ ತಪ್ಪುಗಳಾದಲ್ಲಿ ಅದರನ್ನು ಸರಿಪಡಿಸಲು ಕಷ್ಟ ಅನುಭವಿಸಬೇಕಾಗುತ್ತದೆ, ಈ ನಿಟ್ಟಿನಲ್ಲಿ ಎಲ್ಲರೂ ಈಗಿಂದಲೇ ಜಾಗೃತರಾಗಬೇಕು ಎಂದು ಪೋಷಕರಿಗೆ ತಿಳಿಸಿ ಹೇಳಲಾಯಿತು.
ಶಾಲೆಯಲ್ಲಿ ಕೊರತೆ ಇದ್ದಂತಹ ಶಿಕ್ಷಕರ ಸಮಸ್ಯೆ ಸಂಬಂಧಿಸಿದಂತೆ ಈಗಾಗಲೇ ನಿಯೋಜನೆಯಲ್ಲಿ ಬಂದಂತಹ ಶಿಕ್ಷಕರು ಸೇರಿದಂತೆ 6 ಮಂದಿ ಇದ್ದು, ಈ ಪೈಕಿ ಓರ್ವರು ವಾರದಲ್ಲಿ 3 ದಿನ ಮಾತ್ರ ಬರುತ್ತಿದ್ದು, ಶಾಲೆಯಲ್ಲಿ 8 ತರಗತಿಗಳಿಗೆ ಅನುಗುಣವಾಗಿ ಇನ್ನೂ ಕನಿಷ್ಠ 3 ಶಿಕ್ಷಕರ ಕೊರತೆ ಇದ್ದು, ಇದನ್ನು ಮುಂದೆ ಅತಿಥಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆಯನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.
ಜನಪ್ರತಿನಿಧಿಗಳಿಗೆ ಕೃತಜ್ಞತೆ
ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಪೋಷಕರ ಬೇಡಿಕೆಗೆ ಅನುಗುಣವಾಗಿ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷೆ, ಮತ್ತು ಸದಸ್ಯರುಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ನಝೀರ್ ಪೂರಿಂಗ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ಮಹಾಬಲೇಶ್ವರ ಭಟ್, ಬಾಬು ಅಗರಿ, ಇಸ್ಮಾಯೀಲ್, ಪೆರ್ನು, ಉಷಾ, ಸರಸ್ವತಿ, ನಸೀಮಾ ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶೇಖರ್ ಅತ್ನಿ ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮಾ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.