ಕಳವು: ಆರೋಪಿಗಳ ಬಂಧನ
ಲಕ್ಷಾಂತರ ರೂ. ವೌಲ್ಯದ ಸೊತ್ತು ವಶ
ದಾವಣಗೆರೆ, ಜೂ.9: ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಅವರಿಂದ 5.65 ಲಕ್ಷ ರೂ. ವೌಲ್ಯದ 416 ಗ್ರಾಂ. ಚಿನ್ನಾಭರಣ, 3.5 ಕೆಜಿ ಬೆಳ್ಳಿ ಆಭರಣ, 4 ಟಿವಿಗಳು, 1 ಕ್ಯಾಮೆರಾ ಮತ್ತು 1 ವಾಚ್ ಸೇರಿದಂತೆ ಒಟ್ಟು ಅಂದಾಜು 15,66,900(ಹದಿನೈದು ಲಕ್ಷದ ಅರವತ್ತೈದು ಸಾವಿರದ ಒಂಬೈನೂರು) ರೂ. ಬೆಲೆ ಬಾಳುವ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಎಸ್ ಗುಳೇದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಸ್ರುಲ್ಲಾ, ಝುಲ್ಫೀ ಖಾನ್ ಬಂಧಿತರು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 4, ಹರಿಹರನಗರ ಪೊಲೀಸ್ ಠಾಣೆಯ 2, ಹರಪನಹಳ್ಳಿ ಪೊಲೀಸ್ ಠಾಣೆಯ 2, ದಾವಣಗೆರೆ ಆಝಾದ್ ನಗರ ಠಾಣೆಯ 1, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 1 ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯ 1 ಪ್ರಕರಣ, ಒಟ್ಟು ಸೇರಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಗ್ರಾ.ಉಪವಿಭಾಗದ ಡಿವೈಎಸ್ಪಿಬಿ.ಎಸ್ ನೇಮಗೌಡ, ಸಿಪಿಐ ಜೆ. ಎಸ್. ನ್ಯಾಮೇಗೌಡರ್ , ಪಿಎಸ್ಸೈ ಸುನೀಲ್ ಕುಮಾರ್ ಎಚ್, ಪಿಎಸ್ಸೈ ಹನುಮಂತಪ್ಪ ಶಿರಿಹಳ್ಳಿ, ಅಪರಾಧ ಪತ್ತೆ ದಳದ ಸಿಬ್ಬಂದಿ ಉಪಸ್ಥಿತರಿದ್ದರು.





