ಆಪ್ ನಗರ ನಿಗಮ ಸದಸ್ಯನಿಗೆ ತಪರಾಕಿ: ಬಿಜೆಪಿಯನ್ನು ಗೂಂಡಾಗಳ ಪಕ್ಷ ಎಂದ ಕೇಜ್ರಿವಾಲ್
ಹೊಸದಿಲ್ಲಿ, ಜೂನ್ 10: ಬಿಜೆಪಿ ಆಡಳಿತ ಇರುವ ಮೂರು ನಗರ ನಿಗಮಗಳ ಜಂಟಿ ಅಧಿವೇಶನದಲ್ಲಿ ಗುರುವಾರ ಆಮ್ ಆದ್ಮಿ ಪಾರ್ಟಿಯ ಸದಸ್ಯ ರಾಕೇಶ್ ಕುಮಾರ್ರನ್ನು ಥಳಿಸಿದ ಘಟನೆವರದಿಯಾಗಿದೆ. ರಾಕೇಶ್ ಕುಮಾರ್ರು ಬಿಜೆಪಿಯ ಮೂರು ನಾಲ್ಕು ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಅಧಿವೇಶನದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿಪಾರ್ಟಿಯ ವಿರುದ್ಧ ಸುಳ್ಳು ಮಾಹಿತಿ ನೀಡಲಾಗುತಿತ್ತು . ಆಗ ರಾಕೇಶ್ ಕುಮಾರ್ ಅದನ್ನು ವಿರೋಧಿಸಿದ್ದಕ್ಕೆ ಅವರಮೇಲೆ ಹಲ್ಲೆ ನಡೆಸಲಾಗಿದೆ. ಇದೆಲ್ಲ ಎಂಸಿಡಿ ಮೇಯರ್ ಸಂಜೀವ್ ನಯ್ಯರ್, ಸತ್ಯಾ ಶರ್ಮ ಹಾಗೂ ಶ್ಯಾಮ್ ಶರ್ಮರ ಮುಂದೆಯೇ ನಡೆದಿದೆ. ಹಾಗೂ ತನ್ನನ್ನು ಪಾರು ಮಾಡಲು ಯಾರೂ ಬರಲಿಲ್ಲ ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ. ರಾಕೇಶ್ ಕುಮಾರ್ ನಾರ್ಥ್ ಎಂಸಿಡಿಯ ವಾಡ್ 82 ಸದಸ್ಯರಾಗಿದ್ದಾರೆ.
ರಾಕೇಶ್ ಕುಮಾರ್ಗೆ ಹಲ್ಲೆ ನಡೆಸಲು ಅವರು ಧರಿಸಿದ ಟೋಪಿ ನೆಪವಾಗಿತ್ತು ಎನ್ನಲಾಗಿದೆ. ಟೋಪಿಯಲ್ಲಿ ಮೈ ಆಂ ಆದ್ಮಿ ಹೂಂ ಎಂದು ಬರೆದಿತ್ತು. ಅದನ್ನು ಧರಿಸಿ ಏನನ್ನೋ ಮಾತಾಡಲು ಹೊರಟಾಗ ಬಿಜೆಪಿ ಸದಸ್ಯರು ವಿರೋಧಿಸಿದರು. ಕೆಲವರು ಅವರ ತಲೆಯಿಂದ ಟೋಪಿಯನ್ನು ಕಿತ್ತುಕೊಂಡರು. ಆದರೆ ಆಡಳಿತಾರೂಢ ಬಿಜೆಪಿ ಉದ್ದೇಶಪೂರ್ವಕವಾಗಿ ಅವರು ಗದ್ದಲವೆಬ್ಬಿಸಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ. ವಿಪಕ್ಷಗಳು ಕೂತುಕೊಳ್ಳುವಲ್ಲಿ ಕೂರದೆ ಆಡಳಿತ ಪಕ್ಷ ಕೂತುಕೊಳ್ಳುವಲ್ಲಿ ರಾಕೇಶ್ ಕುಮಾರ್ ಬಂದು ಕೂತಿದ್ದರು ಎಂದು ಆರೋಪಿಸಿದೆ.
ರಾಕೇಶ್ ಕುಮಾರ್ ತಾನು ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದು ಅವರು ಕೇಸು ದಾಖಲಿಸಿಕೊಂಡಿದ್ದಾರೆ. ತನಗೆ ಹಲ್ಲೆ ನಡೆಸಿದ ಮೂರು ನಾಲ್ಕು ಮಂದಿಯನ್ನು ಗುರುತಿಸಬಲ್ಲೆ ಎಂದು ಹೇಳಿದ್ದಾರೆ. ರಾಕೇಶ್ಕುಮಾರ್ಗೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಲಿತರನ್ನು ಗುರಿ ಮಾಡಿಕೊಂಡ ಬಿಜೆಪಿ ಗೂಂಡಾಗಳ ಪಾರ್ಟಿ ಎಂದಿದ್ದಾರೆ. ಬಿಜೆಪಿ ಸ್ವಯಂ ಸುಧಾರಿಸಿಕೊಳ್ಳಲಿ. ಒಂದು ವೇಳೆ ಸುಧಾರಿಸಿಲ್ಲವೆಂದಾದರೆ ಈ ದೇಶದಲ್ಲಿ ಎಲ್ಲರೂ ಸೇರಿ ಪಾಠ ಕಲಿಸಲಿದ್ದಾರೆ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.