‘ದಲಿತ ವಿರೋಧಿ ಹೈದರಾಬಾದ್ ವಿವಿ’ ಪ್ರೊಫೆಸರ್ ರಾಜೀನಾಮೆ
ಹೈದರಾಬಾದ್,ಜೂ.10: ಹೈದರಾಬಾದ್ ವಿವಿಯ ಉಪ ಕುಲಪತಿ(ಪ್ರೋ ವೈಸ್ ಚಾನ್ಸಲರ್)ಯಾಗಿ ಪ್ರೊ.ವಿಪಿನ್ ಶ್ರೀವಾಸ್ತವ ಅವರ ನೇಮಕವನ್ನು ವಿರೋಧಿಸಿ ವಿವಿಯ ಸಾಮಾಜಿಕ ಬಹಿಷ್ಕಾರ ಮತ್ತು ಸೇರ್ಪಡೆ ನೀತಿ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ದಲಿತ ಪ್ರೊಫೆಸರ್ ಶ್ರೀಪತಿ ರಾಮುಡು ಅವರು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ವಿವಿಯ ಕ್ಯಾಂಪಸ್ನಲ್ಲಿ ದಲಿತ ವಿರೋಧಿ ವಾತಾವರಣವಿದೆ ಎಂದೂ ಅವರು ಆರೋಪಿಸಿದ್ದಾರೆ.
ಗುರುವಾರ ವಿವಿಯ ಕುಲಸಚಿವರಿಗೆ ಸಲ್ಲಿಸಿರುವ ತನ್ನ ರಾಜೀನಾಮೆ ಪತ್ರದಲ್ಲಿ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ ವೇಮುಲಾರ ಆತ್ಮಹತ್ಯೆಯನ್ನು ಪ್ರಸ್ತಾಪಿಸಿರುವ ಅವರು, ಆ ಘಟನೆಯ ಮುನ್ನ ಮತ್ತು ನಂತರ ಕ್ಯಾಂಪಸ್ನಲ್ಲಿಯ ಬೆಳವಣಿಗೆಗಳನ್ನು ತಾನು ಗಮನಿಸುತ್ತಿದ್ದೇನೆ. ಕ್ಯಾಂಪಸ್ನಲ್ಲಿಯ ಪ್ರಚಲಿತ ವಾತಾವರಣವು ಹದಗೆಟ್ಟಿದೆ ಮತ್ತು ದಲಿತ ಸಮುದಾಯವು ಬೆದರಿಕೆಯನ್ನು ಅನುಭವಿಸುತ್ತಿದೆ. ತಾವು ತುಂಬ ದುರ್ಬಲರೆಂಬ ಭಾವನೆಗೆ ಪಕ್ಕಾಗಿರುವ ದಲಿತ ವಿದ್ಯಾರ್ಥಿಗಳು ಆಡಳಿತದ ನ್ಯಾಯಪರತೆಯ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ದಲಿತರ ಭಾವನೆಗಳನ್ನು ಚೆನ್ನಾಗಿ ಅರಿತಿರುವ ದಲಿತ ಬೋಧಕರು ಎಸ್ಸಿ-ಎಸ್ಟಿ ಶಿಕ್ಷಕರ ವೇದಿಕೆಯ ಹಲವಾರು ಪತ್ರಗಳ ಮೂಲಕ ಇದನ್ನು ವ್ಯಕ್ತಪಡಿಸಿದ್ದು, ಆಡಳಿತವು ವಿಶ್ವಾಸ ನಿರ್ಮಾಣ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ತಾನು ಆಶಿಸಿದ್ದೆ. ಆದರೆ ಪ್ರೊ.ವಿಪಿನ್ ಶ್ರೀವಾಸ್ತವ ಅವರನ್ನು ಉಪ ಕುಲಪತಿಯನ್ನಾಗಿ ನೇಮಕಗೊಳಿಸಿರುವ ಕುರಿತ ಸುತ್ತೋಲೆ ತನಗೆ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಶ್ರೀವಾಸ್ತವ ಅವರು ವೇಮುಲಾ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳ ವಿರುದ್ಧ ದಂಡನೆಗೆ ಶಿಫಾರಸು ಮಾಡಿದ್ದ ಸಮಿತಿಯ ಅಧ್ಯಕ್ಷರಾಗಿದ್ದರು.
ಈ ಬೆಳವಣಿಗೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಶ್ರೀವಾಸ್ತವ ಅವರು, ಆಡಳಿತಾತ್ಮಕ ವಿಷಯಗಳಲ್ಲಿ ರಾಮುಡು ಅವರು ಸಹಕರಿಸುತ್ತಿರಲಿಲ್ಲ ಮತ್ತು ಯಾವುದೇ ಕಾರ್ಯಕ್ಕೆ ಹಾಜರಾಗುತ್ತಿರಲಿಲ್ಲ. ತಾನು ಇಂದಿನಿಂದ ರಜೆಯಲ್ಲಿರುವುದರಿಂದ ಅವರ ರಾಜೀನಾಮೆಯ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದರು.