‘ದೇವಮಾನವ’ನ ವಶದಲ್ಲಿದ್ದ 28 ಮಂದಿಯ ರಕ್ಷಣೆ
ಮುಂಬೈ,ಜೂ.11: ಸ್ವಘೋಷಿತ ‘ದೇವಮಾನವ’ನೊಬ್ಬ ಮುಂಬೈನ ಕಾಂಡಿವಿಲಿ ಪ್ರದೇಶದ ಬಂಗಲೆಯೊಂದರಲ್ಲಿ ಬಂಧಿಸಿಟ್ಟಿದ್ದ 12 ಮಂದಿ ಅಪ್ರಾಪ್ತರು ಸೇರಿದಂತೆ 28 ಮಂದಿಯನ್ನು ಪೊಲೀಸರು ಪಾರು ಮಾಡಿದ್ದಾರೆ. ಆರೋಪಿ ‘ದೇವಮಾನವ’ನು, ಇವರೆಲ್ಲರನ್ನು ಲೈಂಗಿಕ ದೌರ್ಜನ್ಯಗಳಿಗೆ ಬಳಸಿಕೊಳ್ಳುತ್ತಿದ್ದನೆನ್ನಲಾಗಿದೆ. ಬಂಗಲೆಯಲ್ಲಿ ಕೂಡಿಹಾಕಲ್ಪಟ್ಟಿದ್ದ ಬಾಲಕರಲ್ಲೊಬ್ಬನು, ತನ್ನ ಬಂಧುವೊಬ್ಬರಿಗೆ, ದೇವಮಾನವನ ದೌರ್ಜನ್ಯಗಳ ಬಗ್ಗೆ ಮಾಹಿತಿ ನೀಡಿದ್ದನು. ಕೂಡಲೇ ಆ ಬಂಧುವು ಪೊಲೀಸರಿಗೆ ವಿಷಯ ತಿಳಿಸಿದ್ದನು. ಆತನ ಮಾಹಿತಿಯನ್ನಾಧರಿಸಿ, ಸಮತಾ ನಗರದ ಠಾಣೆಯ ಪೊಲೀಸ್ ತಂಡವೊಂದು ಶುಕ್ರವಾರ ಸಂಜೆ ಬಂಗಲೆಯ ಮೇಲೆ ದಾಳಿ ನಡೆಸಿ, 12 ಅಪ್ರಾಪ್ತರು ಸೇರಿದಂತೆ 28 ಯುವಕರನ್ನು ರಕ್ಷಿಸಿದರು. ಅವರಲ್ಲಿ ಹೆಚ್ಚಿನವರು ಉತ್ತರಪ್ರದೇಶದವರೆಂದು ಸಮತಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಯನಾ ನಾಟೆ ತಿಳಿಸಿದ್ದಾರೆ. ಧಾರ್ಮಿಕ ವಿಧಿಗಳ ಆಚರಣೆಯ ಹೆಸರಿನಲ್ಲಿ ಈ ಮಕ್ಕಳನ್ನು ಶೋಷಿಸಲಾಗುತ್ತಿತ್ತು ಎಂದರು.
ಈ ಸಂಬಂಧ ಭಗವಾನ್ ದಾಸ್ತಿವಾರಿ ಹಾಗೂ ದೇವೇಂದ್ರ ಮನೋಜ್ ದುಬೆ ಎಂಬವರನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂದು ಇನ್ಸ್ಪೆಕ್ಟರ್ ನಾಟೆ ತಿಳಿಸಿದ್ದಾರೆ.