ನಕ್ಸಲ್ಪೀಡಿತ ಪ್ರದೇಶದಲ್ಲಿ ಹಳ್ಳ ಹಿಡಿದ ಕೈಮಗ್ಗ ಘಟಕ
ಅಸ್ಥಿಪಂಜರದಂತಾಗಿರುವ ಪರಿಕರಗಳು

<ಅಝೀಝ್ ಕಿರುಗುಂದ
ಚಿಕ್ಕಮಗಳೂರು, ಜೂ.12 ನಕ್ಸಲ್ ಪ್ರಭಾವಿತ ಪ್ರದೇಶದ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸಿ ಸ್ವಾವಲಂಬಿ ಜೀವನ ನಡೆಸುವ ಸದುದ್ದೇಶದಿಂದ ಕೊಪ್ಪ ತಾಲೂಕಿನಲ್ಲಿ ಆರಂಭಿಸಿದ್ದ ಕೈಮಗ್ಗ ಘಟಕಗಳು ದೂರದೃಷ್ಟಿ ಕೊರತೆ ಫಲವಾಗಿ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಘಟಕದಲ್ಲಿರುವ ಬೆಲೆಬಾಳುವ ಅಗತ್ಯ ಉಪಕರಣಗಳು ಇದೀಗ ಕೇವಲ ಸತ್ತ ಮನುಷ್ಯನ ಅಸ್ಥಿಪಂಜರದಂತಾಗಿ ಹೋಗಿದೆ.
ಹೇಳಿ, ಕೇಳಿ ಮಲೆನಾಡು ಭಾಗವಾದ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳು ನಕ್ಸಲ್ ಪ್ರಭಾವಿತ ಪ್ರದೇಶ ಎಂಬುದು ಜನಜನಿತ. ಈ ಭಾಗದ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕೈತುಂಬಾ ಕೆಲಸವನ್ನು ನೀಡಿ, ಆರ್ಥಿಕ ಜೀವನ ಸುಧಾರಿಸಿ ಸ್ವಾವಲಂಬಿಗಳಾಗಿ ಬದುಕು ನಡೆಸುವಂತಾಗಬೇಕು ಎನ್ನುವ ಉದ್ದೇಶದಿಂದ ಐದು ವರ್ಷಗಳ ಹಿಂದೆ ಕೈಮಗ್ಗ ಘಟಕಗಳನ್ನು ತೆರೆಯಲಾಯಿತು. ಮಾರುಕಟ್ಟೆ ಕೌಶಲ್ಯಾಭಿವೃದ್ಧಿ ಪೂರಕ ಅಂಶಗಳ ಅಧ್ಯಯನ ನಡೆಸದೇ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದ ಕೈಮಗ್ಗ ಘಟಕಗಳನ್ನು ತೆರೆದಿರುವುು ಸ್ಥಗಿತಗೊಳ್ಳಲು ಮೂಲ ಕಾರಣವಾಗಿರುವ ಆರೋಪ ಸ್ಥಳೀಯರದ್ದಾಗಿದೆ.
ಜವಳಿ ಮತ್ತು ಕೈಮಗ್ಗ ಇಲಾಖೆ, ಮಲೆನಾಡು ಪರಿವರ್ತನಾ ಕೈಮಗ್ಗ ಘಟಕ ವಿವಿಧೊದ್ದೇಶ ನೇಕಾರರ ಸಹಕಾರ ಸಂಘದ ಆಶ್ರಯಗಳಲ್ಲಿ ಈ ಘಟಕವನ್ನು ಆರಂಭಿಸಿದ ಬಳಿಕ 6 ತಿಂಗಳ ಕಾಲ ತರಬೇತಿಯನ್ನು ಸ್ಥಳೀಯರಿಗೆ ನೀಡಲಾಗಿತ್ತು. ಬಳಿಕ ವೈಯಕ್ತಿಕ ನೆಲೆಗಟ್ಟಿನಲ್ಲಿ ಕೆಲವರಿಗೆ ಕೈಮಗ್ಗ ಉಪಕರಣಗಳನ್ನು ಕೊಡಲಾಯಿತು. ಇದಕ್ಕೆ ಪ್ರತಿ ಫಲಾನುಭವಿ ತಲೆಯ ಮೇಲೆ 40 ಸಾವಿರ ರೂ.ಗಳ ಹೊರೆಯೂ ಬಿದ್ದಿರುವುದು ಗಮನಾರ್ಹ ಸಂಗತಿಯಾಗಿದೆ. ಆರಂಭದಲ್ಲಿ ಚೆನ್ನಾಗಿಯೇ ನಡೆದ ಘಟಕವು ಬಳಿಕ ವೈಫಲ್ಯದ ಹಾದಿಯಲ್ಲಿ ಸಾಗಿದ್ದು, ದುರದೃಷ್ಟಕರ ಬೆಳವಣಿಗೆಯಾಗಿದೆ. ಸಾಮೂಹಿಕ ಕಾರ್ಯಾಗಾರಕ್ಕೆ ಎಂದೋ ಬೀಗ ಜಡಿಯಲಾಗಿದೆ. ಹೀಗಾಗಿ ಸ್ಥಗಿತವಾದ ಉಪಕರಣಗಳು ಸಂಪೂರ್ಣವಾಗಿ ಪಾಳು ಬಿದ್ದಿದ್ದು, ತುಕ್ಕು ಹಿಡಿಯತೊಡಗಿವೆ. ಕಚ್ಚಾ ವಸ್ತುಗಳೂ ಕೂಡ ಕೆಲಸಕ್ಕೆ ಬಾರದಂತೆ ಎಲ್ಲೆಂದರಲ್ಲಿ ಹರಡಿಕೊಂಡಿದೆ. ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿಕುಡಿಗರೆ ಎಂಬಲ್ಲಿಗೆ ಹೋದರೆ ಈ ಕೈಮಗ್ಗ ಘಟಕದ ಕರುಣಾಜನಕ ಕಥೆ ಹೆಡೆ ಬಿಚ್ಚಿ ನಿಂತುಕೊಳ್ಳುತ್ತದೆ.
ವೈಯಕ್ತಿಕ ನೆಲೆಗಟ್ಟಿನಲ್ಲಿ ಮನೆಗಳಲ್ಲಿ ಕೆಲವು ಘಟಕಗಳು ಕೆಲಸ ನಿರ್ವಹಿಸುತ್ತಿದೆಯಾದರೂ ನಿರೀಕ್ಷಿತ ಫಲ ದೊರೆಯುತ್ತಿಲ್ಲ. ಅಬ್ಬಬ್ಬಾ ಎಂದರೆ ದಿನಕ್ಕೆ 4 ಟವಲ್ ನೇಯಬಹುದಷ್ಟೇ. ಒಂದು ಟವಲ್ಗೆ 20 ರೂ.ಗಳು ದೊರೆತರೂ ಒಂದು ದಿನದ ಒಬ್ಬನ ದುಡಿಮೆ ಕೇವಲ 80 ರೂ.ಗಳಾಗುತ್ತಿದೆಯಷ್ಟೆ. ಅದು ಬಿಟ್ಟು ಬೇರೆ ಕೂಲಿ ಕೆಲಸಕ್ಕೆ ಹೋದರೆ ದಿನವೊಂದಕ್ಕೆ ಕನಿಷ್ಠ ಎಂದರೂ 400 ರಿಂದ 500 ರೂ. ಸಂಬಳ ಕೈಗೆ ಬರುತ್ತದೆ ಎನ್ನುತ್ತಾರೆ ಸ್ಥಳೀಯರಾದ ಕೈಮಗ್ಗ ಕೆಲಸಗಾರ ದಿನೇಶ್ಎಂಬವರು.
ಒಟ್ಟಾರೆ ಜವಳಿ ಮತ್ತು ಕೈಮಗ್ಗ ಇಲಾಖೆ ಅಧಿಕಾರಿಗಳು, ಮೇಲ್ವಿಚಾರಕರ ಉದಾಸೀನ, ನಿರ್ಲಕ್ಷ್ಯದ ಪರಿಣಾಮದ ಜೊತೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಹಾಯಧನವೂ ಬಾರದೆ ಸಾಲದ ಹೊರೆ ಭಾರವಾಗಿದೆ. ಇದರ ಯಶೋಗಾಥೆ ಬರೆಯಬೇಕಿದ್ದ ಈ ಸಮಯದಲ್ಲಿ ಯೋಜನೆಯೇ ಹಳ್ಳ ಹಿಡಿದಿರುವ ಬಗ್ಗೆ ಬರೆಯಬೇಕಾಗಿ ಬಂದಿರುವುದು ದುರದೃಷ್ಟಕರ.







