ಪ್ರಥಮ ಹಂತದ ಸಾಮಾಜಿಕ ಪರಿಶೋಧನೆ

ಬೆಳ್ತಂಗಡಿ, ಜೂ.12: ವೈಯಕ್ತಿಕ ಕಾಮಗಾರಿಯ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಿಗುವ ಅನುದಾನವು ಸಹಕಾರಿಯಾಗಲಿದೆ. ಉದ್ಯೋಗ ಖಾತರಿ ಯೋಜನೆ ಮುಖಾಂತರ ಹೆಚ್ಚು ಕೃಷಿ ಕಾರ್ಯಗಳನ್ನು ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಮಾಡುವ ಮೂಲಕ ಸರಕಾರದ ಯೋಜನೆಯನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಅಭಿಪ್ರಾಯಪಟ್ಟರು. ಬಂದಾರು ಗ್ರಾಪಂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2016-17ನೆ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ಬಗ್ಗೆ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ಹಾಗೂ ಮಾರ್ಗದರ್ಶಕ ಅಧಿಕಾರಿಯಾಗಿ ಅವರು ಭಾಗವಹಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಬಿ.ಕೆ. ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾಮದಲ್ಲಿ ಕೃಷಿ ಅಭಿವೃದ್ಧಿ, ಇಂಗುಗುಂಡಿ, ರಸ್ತೆ ಕಾಂಕ್ರಿಟೀಕರಣದ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಪಂ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗ್ರಾಪಂ ಉಪಾಧ್ಯಕ್ಷೆ ಚಂದ್ರಾವತಿ ಕೆ.ವೈ., ನರೇಗ ಯೋಜನೆಯ ತಾಲೂಕು ಸಂಯೋಜಕಿ ಪವಿತ್ರಾ ಶೆಟ್ಟಿ, ನರೇಗ ಅಭಿಯಂತರ ಶರಣ್ ರೈ, ಪಿಡಿಒ ಶಾರದಾ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿ ದಿನಕರ ವಂದಿಸಿದರು.





