ಸೇನಾ ಅಡುಗೆಯವನ ಮಗ ಮಿಲಿಟರಿ ಅಕಾಡೆಮಿಯ ಶ್ರೇಷ್ಠ ಕೆಡೆಟ್ !
![ಸೇನಾ ಅಡುಗೆಯವನ ಮಗ ಮಿಲಿಟರಿ ಅಕಾಡೆಮಿಯ ಶ್ರೇಷ್ಠ ಕೆಡೆಟ್ ! ಸೇನಾ ಅಡುಗೆಯವನ ಮಗ ಮಿಲಿಟರಿ ಅಕಾಡೆಮಿಯ ಶ್ರೇಷ್ಠ ಕೆಡೆಟ್ !](https://www.varthabharati.in/sites/default/files/images/articles/2016/06/13/52720932.jpg)
ಡೆಹ್ರಾಡೂನ್: ಸೇನಾ ಅಡುಗೆಯಾಳಾಗಿರುವ ಗೋಪಾಲ್ ಸಿಂಗ್ ಬಿಷ್ಟ್ ಅವರ ಸಂತಸಕ್ಕೆ ಪಾರವೇ ಇಲ್ಲ. ಶನಿವಾರದಂದು ಅವರ ಪುತ್ರ ರಾಜೇಂದ್ರ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ 609 ಮಂದಿ ಇತರರೊಂದಿಗೆ ಪದವಿ ಪಡೆದು ತನ್ನನ್ನು ಸೇನಾ ಅಧಿಕಾರಿ ಮಾಡಬೇಕೆಂಬ ತಂದೆಯ ಕನಸನ್ನು ನನಸಾಗಿಸಿದ್ದಾನೆ. ಅಷ್ಟೇ ಅಲ್ಲ ಅತ್ಯುತ್ತಮ ಆಲ್ ರೌಂಡ್ ಜಂಟಲ್ ಮೆನ್ ಕೆಡೆಟ್ ಎಂದು ಪರಿಗಣಿತನಾಗಿ ಪ್ರತಿಷ್ಠಿತ `ಸ್ವೋರ್ಡ್ ಆಫ್ ಹಾನರ್' ಪ್ರಶಸ್ತಿ ಕೂಡ ಪಡೆದಿದ್ದಾನೆ.
``ನನ್ನ ಪುತ್ರ ಏನಾದರೂ ದೊಡ್ಡ ಸಾಧನೆ ಮಾಡಿಯೇ ಮಾಡುತ್ತಾನೆಂಬ ನಂಬಿಕೆ ನನಗಿತ್ತು. ಆತ ಸೇನಾ ಅಧಿಕಾರಿಯಾಗುವಂತೆ ನಾನು ಬಹಳ ಶ್ರಮ ಪಟ್ಟೆ,'' ಎಂದು ಬಿಷ್ಟ್ ಹೇಳುತ್ತಾರೆ.
ಅಕಾಡೆಮಿಯಲ್ಲಿ ಅವರ ಪತ್ರ ತನ್ನ ಬದ್ಧತೆ ಹಾಗೂ ಶಿಸ್ತಿನ ಮೂಲಕ ಎಲ್ಲರ ಗಮನ ಸೆಳೆದಿದ್ದ. ರಾಜೇಂದ್ರನಲ್ಲಿದ್ದ ಅಪ್ರತಿಮ ಪ್ರತಿಭೆಯನ್ನು ಹಿರಿಯ ಅಧಿಕಾರಿಗಳು ಮೊದಲೇ ಗಮನಿಸಿದ್ದರು. ``ಆತ ದೈಹಿಕ ಸಾಮರ್ಥ್ಯ, ಕಲಿಕೆ, ಶಸ್ತ್ರಾಸ್ತ್ರ ತರಬೇತಿ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ. ಎಲ್ಲರನ್ನೂ ಹಿಂದಿಕ್ಕಿ ಉತ್ತಮ ಕಾರ್ಯನಿರ್ವಹಣೆ ತೋರುವ ಕೆಡೆಟ್ ಗೆ ಸ್ವೋರ್ಡ್ ಆಫ್ ಹಾನರ್ ನೀಡಲಾಗುತ್ತದೆ,'' ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ. ``ಯಾವುದೇ ಗುರಿ ಸಾಧಿಸಲು ಸತತ ಪ್ರಯತ್ನಗಳು ಹಾಗೂ ಕಠಿಣ ಶ್ರಮ ಅಗತ್ಯ. ಶ್ರೇಷ್ಠ ಕೆಡೆಟ್ ಗೌರವವನ್ನು ಸ್ವೀಕರಿಸಲು ನನಗೆ ಸಂತೋಷವಾಗುತ್ತದೆ,''ಎಂದು ರಾಜೇಂದ್ರ ಹೇಳುತ್ತಾರೆ