ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ದೋಷಿ ನ್ಯಾಯಾಲಯಕ್ಕೆ ಶರಣು
ಅಹ್ಮದಾಬಾದ್,ಜೂ.13: 2002ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿತನಾಗಿರುವ ಕೈಲಾಶ ಧೋಬಿ ಸೋಮವಾರ ಇಲ್ಲಿಯ ವಿಶೇಷ ಸಿಟ್ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಪ್ರಕರಣದಲ್ಲಿ ಬಂಧಿತನಾಗಿ 14 ವರ್ಷಗಳ ಕಾಲ ಜೈಲಿನಲ್ಲಿದ್ದು, ಕಳೆದ ವರ್ಷ ಜಾಮೀನು ಬಿಡುಗಡೆಗೊಂಡಿದ್ದ ಈತ ಬಳಿಕ ತಲೆಮರೆಸಿಕೊಂಡಿದ್ದ.
ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೋಷಿಯೆಂದು ನ್ಯಾಯಾಲಯದಿಂದ ಘೋಷಿತ 11 ಜನರಲ್ಲಿ ಓರ್ವನಾಗಿರುವ ಧೋಬಿ ಆರೋಪ ಪಟ್ಟಿಯಲ್ಲಿ ನಂ.1 ಆರೋಪಿಯೆಂದು ಹೆಸರಿಸಲ್ಪಟ್ಟಿದ್ದ. ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರು ಕೊಲ್ಲಲ್ಪಟ್ಟಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಆರೋಗ್ಯ ಕಾರಣಗಳನ್ನು ನೀಡಿ ಗುಜರಾತ್ ಉಚ್ಚ ನ್ಯಾಯಾಲಯದಿಂದ ಜಾಮೀನು ಬಿಡುಗಡೆಗೊಂಡಿದ್ದ ಧೋಬಿ, ಬಳಿಕ ಎರಡು ಬಾರಿ ಜಾಮೀನು ವಿಸ್ತರಣೆ ಪಡೆದುಕೊಂಡಿದ್ದ. ಮೂರನೇ ಬಾರಿ ಜಾಮೀನು ಅವಧಿ ವಿಸ್ತರಣೆಯನ್ನು ಕೋರಿ ಆತ ಸಲ್ಲಿಸಿದ್ದ ಅರ್ಜಿ ಈ ವರ್ಷದ ಜ.25ರಂದು ಉಚ್ಚ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡ ಬಳಿಕ ಜಾಮೀನಿನ ಷರತ್ತುಗಳಂತೆ ಆತ ಜನವರಿ 29ರಂದು ಜೈಲು ಅಧಿಕಾರಿಗಳೆದುರು ಶರಣಾಗಬೇಕಾಗಿತ್ತು. ಆದರೆ ಷರತ್ತು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ.
ಇದಕ್ಕೂ ಮುನ್ನ ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಪತ್ರವೊಂದನ್ನು ಬರೆದಿದ್ದ ಆತ ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸುವ ದಿನ ಜೈಲಿಗೆ ವಾಪಸಾಗುವುದಾಗಿ ತಿಳಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನರನ್ನು ಅಪರಾಧಿಗಳೆಂದು ನ್ಯಾಯಾಲಯವು ಜೂ.2ರಂದು ತೀರ್ಪು ನೀಡಿದ್ದು,ಅಂದು ಧೋಬಿ ಶರಣಾಗಿರಲಿಲ್ಲ.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ: ಜೂ.17ರಂದು ಶಿಕ್ಷೆಯ ಪ್ರಮಾಣ ಪ್ರಕಟ
ಅಹ್ಮದಾಬಾದ್,ಜೂ.13: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ 24 ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಜೂ.17ರಂದು ಪ್ರಕಟಿಸುವುದಾಗಿ ಇಲ್ಲಿಯ ವಿಶೇಷ ಸಿಟ್ ನ್ಯಾಯಾಲಯವು ಸೋಮವಾರ ತಿಳಿಸಿತು. ಕೊಲೆ ಆರೋಪದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟವರಿಗೆ ಕನಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿದೆ.
14 ವರ್ಷಗಳಷ್ಟು ಹಳೆಯದಾದ ಪ್ರಕರಣದ ತೀರ್ಪನ್ನು ಜೂ.2ರಂದು ಪ್ರಕಟಿಸಿದ್ದ ನ್ಯಾಯಾಲಯವು 24 ಜನರನ್ನು ದೋಷಿಗಳೆಂದು ಘೋಷಿಸಿತ್ತು. ಈ ಪೈಕಿ 11 ಜನರು ಕೊಲೆ ಅಪರಾಧಿಗಳಾಗಿದ್ದಾರೆ. 2002,ಫೆ.28ರಂದು ಗುಜರಾತಿನಲ್ಲಿ ಕೋಮು ಗಲಭೆ ಭುಗಿಲೆದ್ದಿದ್ದ ಸಂದರ್ಭ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದಾಗ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರು ಕೊಲ್ಲಲ್ಪಟ್ಟಿದ್ದರು.