ನನ್ನನ್ನು ಜೆಡಿಎಸ್ ಸೇರಿಸಿದ್ದು ಬಾಲಗಂಗಾಧರನಾಥ ಸ್ವಾಮೀಜಿ : ಝಮೀರ್ ಖಾನ್

ಬೆಂಗಳೂರು, ಜೂ.13: "ಶ್ರೀ ಬಾಲ ಗಂಗಾಧರ ಸ್ವಾಮೀಜಿ ಸೂಚನೆ ಮೇರೆಗೆ ನಾನು ಜೆಡಿಎಸ್ ಸೇರ್ಪಡೆಯಾಗಿರುವೆ. ಮುಂಬೈಯಲ್ಲಿದ್ದ ನನ್ನನ್ನು ದೇವೇಗೌಡರಿಗೆ ಸಹಾಯ ಮಾಡಲು ಜೆಡಿಎಸ್ ಸೇರ್ಪಡೆಯಾಗುವಂತೆ ದೂರವಾಣಿಯಲ್ಲಿ ತಿಳಿಸಿದ್ದರು.” ಎಂದು ಜೆಡಿಎಸ್ ನಿಂದ ಅಮಾನತುಗೊಂಡಿರುವ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಮಕ್ಕಾ ಯಾತ್ರೆ ಕೈಗೊಂಡಿರುವ ಝಮೀರ್ ಖಾನ್ ಟಿವಿ ಚಾನಲೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಎಚ್.ಡಿ.ರೇವಣ್ಣ ಯಾವಾಗ ನನ್ನನ್ನು ಪಕ್ಷಕ್ಕೆ ಕರೆ ತಂದರೊ ಗೊತ್ತಿಲ್ಲ. ಎಚ್ ಡಿ ರೇವಣ್ಣ ತನ್ನನ್ನು ಜೆಡಿಎಸ್ಗೆ ಕರೆ ತಂದಿರುವುದಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಝಮೀರ್ ಖಾನ್ ಎಚ್.ಡಿ. ಕುಮಾರಸ್ವಾಮಿ ಹಾಳಾಗಲು ಎಚ್.ಡಿ.ರೇವಣ್ಣ ಕಾರಣ ಎಂದು ಆರೋಪಿಸಿದರು. ಜೆಡಿಎಸ್ನಲ್ಲಿ ಈಗಿನ ಎಲ್ಲ ಬೆಳವಣಿಗೆಗಳಿಗೆ ರೇವಣ್ಣ ಕಾರಣ ಎಂದರು.
ರೇವಣ್ಣ ತಾಕತ್ತಿದ್ದರೆ ಚಾಮರಾಜಪೇಟೆಯಲ್ಲಿ ತನ್ನ ವಿರುದ್ಧ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿರುವ ಝಮೀರ್ ಈ ಕ್ಷಣದವರೆಗೂ ತಾನು ಜೆಡಿಎಸ್ ನಲ್ಲಿರುವೆ ಎಂದು ಸ್ಪಷ್ಟಪಡಿಸಿದ್ದಾರೆ.





