ಅನಂತಮೂರ್ತಿ ಬರಹಗಳು ಸಾಂಸ್ಕೃತಿಕ ನೆನಪುಗಳ ನೇಯ್ಗೆ: ಡಾ. ಚೆನ್ನಿ
‘ಊರು ಕಂಡಂತೆ ಅನಂತಮೂರ್ತಿ’ ಕೃತಿ ಬಿಡುಗಡೆ

ತೀರ್ಥಹಳ್ಳಿ, ಜೂ.13: ಅನಂತಮೂರ್ತಿಯವರ ಬರಹಗಳು ತನ್ನ ಸಮುದಾಯದೊಳಗಿನ ನಿರಂತರ ಸಂವಾದವಾಗಿತ್ತು. ಅವರ ಬರಹಗಳಲ್ಲಿ ವಿಶಿಷ್ಟವಾದ ರೂಪವಿತ್ತು. ಅನಂತಮೂರ್ತಿಯವರ ಬರವಣಿಗೆ ಸಾಂಸ್ಕೃತಿಕ ನೆನಪುಗಳ ನೇಯ್ಗೆ ಎಂದು ಕುವೆಂಪು ವಿ.ವಿಯ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಹೇಳಿದ್ದಾರೆ.
ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಸೂರ್ಯನ ಕುದುರೆ ಪ್ರಕಾಶನ ಆಯೋಜಿಸಿದ್ದ ೞಊರು ಕಂಡಂತೆ ಅನಂತಮೂರ್ತಿೞಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಮ್ಮ ಬರಹಗಳಲ್ಲಿ ಆಧುನಿಕ ಪ್ರಶ್ನೆಗಳನ್ನು ಪರಿಸರದ ಮೂಲಕ ಹೊಸ ರೂಪ ನೀಡಿದವರು. ಕುವೆಂಪು ಬಳಿಕ ಅನಂತಮೂರ್ತಿ ಸಾಂಸ್ಕೃತಿಕ ಮಾದರಿಯಾಗಿ ತನ್ನ ಬರವಣಿಗೆಯನ್ನು ಮುಂದುವರಿಸಿದರು. ಈ ಪರಿಸರದ ಮೂಲಕ ಜಗಳ ಮಾಡುತ್ತ ತಮ್ಮ ಕೃತಿಯಲ್ಲಿನ ಅಕ್ಷರಕ್ಕೆ ರೂಪ ನೀಡಿದ ಇವರು, ಅಗ್ರಹಾರದಿಂದ ವಿಶ್ವ ಮಟ್ಟಕ್ಕೇರಿದ ಶ್ರೇಷ್ಠ ಸಾಹಿತಿ ಎಂದು ಬಣ್ಣಿಸಿದರು.
ಈ ಪರಿಸರದ ಬಗೆಗಿನ ಪ್ರತಿರೋಧಕ ಪ್ರಶ್ನೆ ಕೇಳುತ್ತಾ ಪ್ರಾಮಾಣಿಕತೆ ಉಳಿಸಿಕೊಂಡ ಶ್ರೇಷ್ಠ ಸಾಹಿತಿ ಅನಂತಮೂರ್ತಿ, ಆಧುನಿಕ ಬರಹಗಾರರಿಗೆ ದೈವವಾಗಿ ಹಾಗೂ ಸವಾಲಾಗಿದ್ದರು. ಸಮಕಾಲೀನ ಚರಿತ್ರೆಯನ್ನು ಅನಂತಮೂರ್ತಿಯವರು ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಂಡರು. ತುಂಗಾ ಮೂಲ ಉಳಿಸಿ ಚಳವಳಿಯ ಮೂಲಕ ಚರಿತ್ರೆಯ ಘಟ್ಟಕ್ಕೆ ಚಾಲನೆ ನೀಡಿ ಪರಿಸರವನ್ನು ಉಳಿಸಿದ ಶ್ರೇಷ್ಠ ಸಾಹಿತಿ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾ ಡಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಅನಂತಮೂರ್ತಿಯವರು ಶ್ರೇಷ್ಠ ವಿಮರ್ಶಕರಾಗಿ ಹಾಗೂ ಒಬ್ಬ ಲೇಖಕನಾಗಿ ಜನರನ್ನು ಹೇಗೆ ಆಕರ್ಷಿತರನ್ನಾಗಿ ಮಾಡಬೇಕೆಂಬುದನ್ನು ತೋರಿಸಿದರು. ವಿಮರ್ಶೆ ಮಾಡದೆ ಯಾರನ್ನೂ ಒಪ್ಪಿಕೊಳ್ಳಬಾರದು ಎಂಬ ಲೋಹಿಯಾ ಮತ್ತು ಅನಂತಮೂರ್ತಿಯವರ ವಾದಗಳನ್ನು ತಾನೂ ಕಲಿತಿರುವುದಾಗಿ ತಿಳಿಸಿದರು. ವ್ಯಕ್ತಿಗತವಾದ ವಿಮರ್ಶೆ ಬಹುಕಾಲ ಉಳಿಯುವುದಿಲ್ಲ. ಆದರೆ, ಅನಂತಮೂರ್ತಿಯವರ ಬರಹ ನೂರು ಕಾಲ ಉಳಿಯುತ್ತದೆ. ಇವರ ಲೇಖನಗಳು ಸಾಕ್ಷಿಪ್ರಜ್ಞೆ ಬೆಳೆಸುವಂತಹದ್ದು. ಭಾಷಾ ಸೊಗಡಿನ ಶಕ್ತಿಯುಳ್ಳ ಇವರ ಬರಹಗಳಲ್ಲಿ ಸ್ಪಷ್ಟತೆಯನ್ನು ಕಾಣಬಹುದಾಗಿತ್ತು. ಅಹಿಂಸೆಗೆ ಒತ್ತು ಕೊಟ್ಟ ಅನಂತಮೂರ್ತಿ ಇಂತಹ ಶ್ರೇಷ್ಠರು ನಮ್ಮನ್ನಗಲಿದ ಸಂದರ್ಭದಲ್ಲಿ ಕೆಲವು ಶಕ್ತಿಗಳು ಸಂಭ್ರಮ ಪಟ್ಟಿದ್ದರು ಇದು ನಿಜಕ್ಕೂ ದುಃಖದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸೂರ್ಯನ ಕುದುರೆ ಪ್ರಕಾಶನವನ್ನು ಉದ್ಘಾಟಿಸಿದ ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅನಂತಮೂರ್ತಿ ಒಬ್ಬ ಶ್ರೇಷ್ಠ ರಾಜಕೀಯ ಹೋರಾಟಗಾರರಾಗಿದ್ದರು. ಅವರಂತಹ ವಾಗ್ಮಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದ ವ್ಯಕ್ತಿಗಳನ್ನೂ ಆಕರ್ಷಿಸುವ ಶಕ್ತಿ ಅವರಲ್ಲಿತ್ತು. ತುಂಗಾ ಮೂಲ ಹೋರಾಟದ ಚಳವಳಿಯಲ್ಲಿ ನಾನು ಅನಂತಮೂರ್ತಿಯವರೊಡನೆ ಬೆರೆತು ಅಹಿಂಸಾತ್ಮಕ ಹೋರಾಟದಲ್ಲಿ ಕೈಜೋಡಿಸಿದ್ದು ಎಂದಿಗೂ ಮರೆಯಲಾಗದ ಘಟನೆ ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಮಾಜವಾದಿ ಎ.ಪಿ. ರಾಮಪ್ಪ ವಹಿಸಿದ್ದರು. ವೇದಿಕೆಯಲ್ಲಿ ಎಸ್ತರ್ ಅನಂತಮೂರ್ತಿ, ಸಂಪಾದಕ ಮಂಡಳಿಯ ಡಾ. ಶಾಂತಾರಾಂ ಪ್ರಭು, ಹಿರಿಯ ರಂಗ ಕಲಾವಿದ ಸೀತಾರಾಮಾಚಾರ್, ಮುಳುಬಾಗಿಲಿನ ವರದಾಚಾರ್, ರೈತ ಮುಖಂಡ ಕಡಿದಾಳು ಶಾಮಣ್ಣ, ಪಪಂ ಅಧ್ಯಕ್ಷ ರಹ್ಮತುಲ್ಲಾ ಅಸಾದಿ, ಕಸಾಪ ಅಧ್ಯಕ್ಷ ಆಡಿನಸರ ಸತೀಶ್, ಕೃಷಿ ವಿಜ್ಞಾನಿ ಎ.ಎನ್. ನಾಗರಾಜ್, ಸಮಾಜವಾದಿ ಬಿ.ವಿ.ಮೂರ್ತಿ, ಪ್ರಕಾಶಕರಾದ ಇಂದಿರಾ ಅರುಣಾಚಲ ಉಪಸ್ಥಿತರಿದ್ದರು.
ನೆಂಪೆ ದೇವರಾಜ್ ಸ್ವಾಗತಿಸಿ, ಹಾದಿಗಲ್ಲು ರಾಘವೇಂದ್ರ ಪ್ರಾಸ್ತಾವಿಸಿ, ಟಿ.ಕೆ. ರಮೇಶ್ ಶೆಟ್ಟಿ ಹಾಗೂ ಸುಧಾ ದೇವರಾಜ್ ಕಾರ್ಯಕ್ರಮ ನಿರ್ವಹಿಸಿದರು.







