ಮಥುರೆಗೆ ಅಖಿಲೇಶ್ ಭೇಟಿ
ಲಕ್ನೊ, ಜೂ.13: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಮಥುರೆಗೆ ಭೇಟಿ ನೀಡಿದ್ದಾರೆ. ಸಶಸ್ತ್ರ ಪಂಥವೊಂದರ ಅತಿಕ್ರಮಣಕಾರರಿಂದ ನಡೆದ ಹಿಂಸಾಚಾರಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು ಸಹಿತ 24 ಮಂದಿ ಬಲಿಯಾದ ಘಟನೆ ನಡೆದ ಹಲವು ದಿನಗಳ ಬಳಿಕ ಅವರಲ್ಲಿಗೆ ಹೋಗಿದ್ದಾರೆ.
ಹತ ಪೊಲೀಸ್ ಅಧಿಕಾರಿಗಳ ಕುಟುಂಬಗಳನ್ನು ಭೇಟಿ ಮಾಡಿದ ಅಖಿಲೇಶ್, ಅವರಿಗೆ ಎಲ್ಲ ನೆರವಿನ ಆಶ್ವಾಸನೆಯಿತ್ತರು. ಘಟನೆಯ ಕುರಿತಾಗಿ ಆಳವಾದ ನ್ಯಾಯಾಂಗ ತನಿಖೆಯಾಗಲಿದೆ. ಈ ಘಟನೆಯನ್ನು ರಾಜಕೀಯಗೊಳಿಸಬಾರದು. ಅದನ್ನು ಮಾಡುತ್ತಿರುವವರಿಗೆ, ಅವರ ಆಡಳಿತ ಕಾಲದಲ್ಲೂ ಅಂತಹ ಘಟನೆಗಳು ನಡೆದಿದ್ದವೆಂಬುದನ್ನು ತಾನು ಜ್ಞಾಪಿಸಬಯಸುತ್ತೇನೆಂದು ಅವರು ಹೇಳಿದ್ದಾರೆ.
3 ಸಾವಿರ ಜನರ ಗುಂಪೊಂದು 2 ವರ್ಷಗಳಿಂದ ಜವಾಹರ್ ಬಾಗ್ ಪ್ರದೇಶವನ್ನು ಅತಿಕ್ರಮಿಸಿತ್ತು. ಗುಂಪಿನ ಸದಸ್ಯರು ಆಡಳಿತದ ಮೂಗಿನಡಿಯಲ್ಲೇ ಭಾರೀ ಶಸ್ತ್ರಾಸ್ತ್ರ ಸಂಗ್ರಹ ನಡೆಸಿದ್ದರು. ಅಖಿಲೇಶ್ ಸರಕಾರವು ಹಿಂಸಾಚಾರ ತಡೆಯಲು ಸಂಪೂರ್ಣ ವಿಫಲವಾಗಿದೆಯೆಂದು ವಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.
ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ಕುರಿತು ಎಸ್ಪಿ ಸರಕಾರವು ಈಗಾಗಲೇ ಭಾರೀ ಒತ್ತಡದಲ್ಲಿದೆ. ಬಿಜೆಪಿಯು ಸರಕಾರದ ವಿರುದ್ಧ ದಾಳಿ ಆರಂಭಿಸಿದ್ದು, ರಾಜ್ಯವ್ಯಾಪಿ ಚಳವಳಿಯ ಬೆದರಿಕೆ ಹಾಕಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿನ್ನೆ ಮಥುರಾ ಘಟನೆಯ ಬಗ್ಗೆ ರಾಜ್ಯ ಸರಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದರು. ರಾಜ್ಯದ ಪಶ್ಚಿಮದಲ್ಲಿರುವ ಕೈರಾನಾರಿಂದ ಹಿಂದೂಗಳು ಸಾಮೂಹಿಕ ವಲಸೆ ಹೋಗುತ್ತಿದ್ದಾರೆ. ರಾಜ್ಯದ ಸದ್ಯದ ವಾತಾವರಣವು ಗಂಭೀರ ಕಳವಳದ ವಿಚಾರವಾಗಿದೆಯೆಂದು ಅವರು ಆರೋಪಿಸಿದ್ದರು.