15 ವರ್ಷದಲ್ಲಿ ಭಾರತದಲ್ಲಿ 10 ಕೋಟಿಗೂ ಹೆಚ್ಚು ಮಧುಮೇಹಿಗಳು
ಅಪಾಯ!
ಹೊಸದಿಲ್ಲಿ, ಜೂ.14: ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ ಸಮಸ್ಯೆ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ಅಧಿಕ ತೂಕದ ಜನರ ಸಂಖ್ಯೆ ಅದರಲ್ಲೂ ಮುಖ್ಯವಾಗಿ ಮಧುಮೇಹಕ್ಕೆ ಒಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದು 2016ನೆ ವರ್ಷದ ಜಾಗತಿಕ ಪೌಷ್ಟಿಕತೆ ವರದಿ ಹೇಳಿದೆ.
ವಿಶ್ವದ ಒಟ್ಟು 159 ದಶಲಕ್ಷ ಬೆಳವಣಿಗೆ ಕುಂಠಿತ ಮಕ್ಕಳ ಪೈಕಿ ಮೂರನೆ ಒಂದರಷ್ಟು ಮಕ್ಕಳು ಭಾರತದಲ್ಲಿದ್ದರೂ, ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಬೆಳವಣಿಗೆ ಕುಂಠಿತಗೊಂಡ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 2006ರಲ್ಲಿ ಐದು ವರ್ಷಕ್ಕಿಂತ ಕೆಳಗಿನ ಶೇ.48ರಷ್ಟು ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆಯಿಂದ ಬಳಲುತ್ತಿದ್ದರೆ, 2014ರಲ್ಲಿ ಈ ಪ್ರಮಾಣ ಶೇ.38.7ಕ್ಕೆ ಇಳಿದಿದೆ.
ಅಪೌಷ್ಟಿಕತೆ ಸಮಸ್ಯೆ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ನಿಚ್ಚಳವಾಗಿದೆ. ಹಿಂದಿನ ದಶಕಕ್ಕೆ ಹೋಲಿಸಿದರೆ, ಕಳೆದ ಒಂದು ದಶಕದಲ್ಲಿ, ಅಪೌಷ್ಟಿಕ ಮಕ್ಕಳ ಪ್ರಮಾಣವನ್ನು ಕಡಿತಗೊಳಿಸುವಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಆದರೆ ಆತಂಕಕಾರಿ ವಿಚಾರವೆಂದರೆ, ಭಾರತದಲ್ಲಿ ಅಧಿಕ ತೂಕದ ವ್ಯಕ್ತಿಗಳ ಮತ್ತು ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು. ಭಾರತದ ವಯಸ್ಕರಲ್ಲಿ ಶೇ.9.5ರಷ್ಟು ಮಧುಮೇಹಿಗಳಿದ್ದು, ಜಾಗತಿಕ ಸರಾಸರಿಯಾದ ಶೇ.9ಕ್ಕಿಂತ ಇದು ಹೆಚ್ಚು ಎನ್ನುವ ಅಂಶವನ್ನು ಉಲ್ಲೇಖಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂದಾಜಿನ ಪ್ರಕಾರ, 2000ನೆ ಇಸವಿಯಲ್ಲಿ ಭಾರತದಲ್ಲಿ 32 ದಶಲಕ್ಷ ಮಧುಮೇಹಿಗಳಿದ್ದರೆ, 2013ರಲ್ಲಿ ಈ ಪ್ರಮಾಣ 63 ದಶಲಕ್ಷಕ್ಕೆ ತಲುಪಿದೆ. ಮುಂದಿನ 15 ವರ್ಷದಲ್ಲಿ ಇದು 191.2 ದಶಲಕ್ಷವನ್ನು ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ.
ಭಾರತದ ವೈರುದ್ಧ್ಯವೆಂದರೆ, ಭಾರತ ಸದಾ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಈ ಮಧ್ಯೆ ಅತಿಪೌಷ್ಟಿಕತೆ ಮತ್ತು ಮಧುಮೇಹ ಕೂಡಾ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.