ಒಂದು ಮರ ಸಿಕ್ಕಿದ್ದರೆ ನೇಣು ಬಿಗಿಯುತ್ತಿದ್ದೆ: ಎಂಟಿನಿ

ಹರಾರೆ, ಜೂ.14: ಟೀಮ್ ಇಂಡಿಯಾ ವಿರುದ್ಧ ಸೋಮವಾರ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಝಿಂಬಾಭ್ವೆಯ ಕೋಚ್ ಮಖಾಯ ಎಂಟಿನಿ ಅವರು "ತಂಡ ಸೋತ ಆ ಕ್ಷಣ ಒಂದು ಮರ ಸಿಕ್ಕಿದ್ದರೂ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ” ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಹಿರಿಯ ಹಾಗೂ ಅನುಭವಿ ಆಟಗಾರರಿಗೆ ರೆಸ್ಟ್ ನೀಡಲಾಗಿತ್ತು. ಈ ಕಾರಣದಿಂದಾಗಿ ಟೀಮ್ ಇಂಡಿಯಾ ದುರ್ಬಲವಾಗಿದೆ. ಹೀಗಿದ್ದರೂ ಝಿಂಬಾಬ್ವೆಗೆ ತನ್ನ ತವರಿನಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ.
ಝಿಂಬಾಬ್ವೆ ಕಳೆದ ಹನ್ನೊಂದು ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದೆ. ಭಾರತ ವಿರುದ್ಧ ಸೋಲಿನ ಕ್ಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಚ್ ಹಾಗೂ ದಕ್ಷಿಣ ಆಫ್ರಿಕದ ಮಾಜಿ ವೇಗಿ ಎಂಟಿನಿ " ಆ ಕ್ಷಣ ಒಂದು ಮರ ಸಿಗಲಿಲ್ಲ. ಕನಿಷ್ಠ ಒಂದು ಟೊಮೆಟೊ ಮರವೂ ಸಿಗಲಿಲ್ಲ” ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
" ನಮ್ಮಲ್ಲಿ ಅನುಭವಿ ಆಟಗಾರರಿದ್ದರೂ, ಆಟದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವರಿದ್ದರೂ ಅವರಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದು ಎಂಟಿನಿ ಹೇಳಿದ್ದಾರೆ.





