ದೇಶದ ಸಮಸ್ಯೆಗಳಿಗೆ ಸ್ವದೇಶಿ ಕೋಮುವಾದವೇ ಮೂಲ ಕಾರಣ: ಬರಗೂರು ರಾಮಚಂದ್ರಪ್ಪ
‘ಸಮಕಾಲೀನ ತಲ್ಲಣಗಳು’ ವಿಚಾರ ಸಂಕಿರಣ

ಬೆಂಗಳೂರು, ಜೂ. 14: ಪ್ರಸ್ತುತ ದೇಶ ಎದುರಿಸುತ್ತಿರುವ ಹಲವು ಸಮಸ್ಯೆ ಹಾಗೂ ತಲ್ಲಣಗಳಿಗೆ ಸ್ವದೇಶಿ ಕೋಮುವಾದ ಹಾಗೂ ವಿದೇಶಿ ಬಂಡವಾಳವೇ ಮೂಲ ಬೇರಾಗಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದ್ದಾರೆ.
ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ನಗರದ ಶಿವರಾತ್ರೀಶ್ವರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಮಕಾಲೀನ ತಲ್ಲಣಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರಕಾರಗಳು ವಿದೇಶಿ ಬಂಡವಾಳಕ್ಕೆ ಮಂಡಿ ಊರಿವೆ. ಇದರ ಪರಿಣಾಮ ಆಹಾರ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲವೂ ಉದ್ಯಮವಾಗಿದೆ. ಕೃಷಿ ಮಾಡುತ್ತಿದ್ದ ಪ್ರದೇಶಗಳಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ದಿನೇ ದಿನೇ ಕೃಷಿ ಪ್ರದೇಶಗಳು ಕಡಿಮೆಯಾಗುತ್ತಿವೆ ಎಂದು ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳು ತೃತೀಯ ರಾಷ್ಟ್ರಗಳ ಮೇಲೆ ಆರ್ಥಿಕ ದಬ್ಬಾಳಿಕೆ ಮಾಡುವ ಮೂಲಕ ಯುದ್ಧವನ್ನು ಸಾರಿವೆ. ಇದರ ಪರಿಣಾಮ ಭಾರತ, ಆಫ್ರಿಕಾ ದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಜಾಗೃತಿ ವಹಿಸಬೇಕಾದ ಸರಕಾರಗಳು ಬಂಡವಾಳಶಾಹಿಗಳಿಗೆ ಗುಲಾಮರಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
20ನೆ ಶತಮಾನದಲ್ಲಿ ವಿಶ್ವದ ಎಲ್ಲ ಜನರಿಗೂ ಸಮಾನವಾದ ಶಿಕ್ಷಣ, ಆರೋಗ್ಯ, ಆಹಾರ ಸಿಗಬೇಕೆನ್ನುವುದೆ ಪ್ರಮುಖ ಬೇಡಿಕೆಯಾಗಿತ್ತು. ಇದನ್ನು ಸಾಧಿಸುವುದಕ್ಕಾಗಿ ಜಾಗೃತಿ ಕಾರ್ಯಕ್ರಮಗಳು, ಚಳವಳಿಗಳು ನಡೆಯುತ್ತಿದ್ದವು. ಆದರೆ, ಇಂದು ಹಣಕ್ಕಾಗಿ, ಸಾಮ್ರಾಜ್ಯ ವಿಸ್ತರಣೆಗಾಗಿ ಬಂಡವಾಳಶಾಹಿಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಯುದ್ಧವೂ ಉದ್ಯಮವಾಗಿದೆ:
ಬಂಡವಾಳಶಾಹಿಗಳು ಪ್ರೀತಿ, ಪ್ರೇಮ, ಸಾವು, ನೋವು ಎಲ್ಲವನ್ನು ಉದ್ಯಮವನ್ನಾಗಿಯೆ ನೋಡುತ್ತಾರೆ. ಹೀಗಾಗಿಯೆ ದೇಶ ಪ್ರೇಮದ ಹೆಸರಿನಲ್ಲಿ ದೇಶ-ದೇಶಗಳ ನಡುವೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಆ ಮೂಲಕ ಯುದ್ಧ ಶಸ್ತ್ರಾಸ್ತ್ರಗಳನ್ನು ಯುದ್ಧ ಮಾಡುವ ಎರಡು ದೇಶಗಳಿಗೆ ಮಾರಾಟ ಮಾಡುತ್ತಾರೆ ಎಂದು ಅವರು ಹೇಳಿದರು.
ಬಂಡವಾಳದಿಂದ ಸಂಬಂಧ ಹಾಳು: ಬಂಡವಾಳದಿಂದ ಉಂಟಾಗುವ ಭೋಗದ ಕಲ್ಪನೆ ಸಂಬಂಧಗಳ ನಡುವಿರುವ ಅರ್ಥವನ್ನೆ ಇಲ್ಲವಾಗಿಸುತ್ತಿದೆ. ಇದರ ಪರಿಣಾಮವಾಗಿಯೆ ತಂದೆ-ಮಗಳ, ಅಣ್ಣ-ತಂಗಿಯ ನಡುವೆ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಕುಟುಂಬ ವ್ಯವಸ್ಥೆಗೆ ಅಪಾಯ ತಂದೊಡ್ಡಿದೆ ಎಂದು ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಸತ್ಯವನ್ನು ಒಬ್ಬರಿಂದ ಒಬ್ಬರಿಗೆ ಮುಟ್ಟಿಸುವಂತಹ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ವಿಚಾರವಾದಿಗಳು ಸೇರಿದಂತೆ ಪ್ರತಿಯೊಬ್ಬರು ತಮ್ಮದೆ ಆದ ರೀತಿಯಲ್ಲಿ ವೈಜ್ಞಾನಿಕ ಸಮಾಜವನ್ನು ಕಟ್ಟಲು ಶ್ರಮಿಸಬೇಕಾಗಿದೆ ಎಂದು ಅವರು ಆಶಿಸಿದರು.
ಕರ್ನಾಟಕ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ಸಿ.ವೀರಣ್ಣ ಮಾತನಾಡಿ, ದೇಶದ ಸಾಮಾನ್ಯ ಜನತೆ ಹಲವು ಆತಂಕಗಳನ್ನು ಎದುರಿಸುತ್ತಿದ್ದರೆ, ಅದೇ ಹೊತ್ತಿನಲ್ಲಿ ಕೆಲವು ಕೋಟ್ಯಾಧಿಪತಿಗಳು ಸಂಪತ್ತನ್ನೆಲ್ಲ ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕ್ಗಳಲ್ಲಿ ಮುಚ್ಚಿಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರಕಾರ ವೌನ ವಹಿಸಿರುವುದು ಪ್ರಸ್ತುತ ದೇಶ ಎದುರಿಸುತ್ತಿರುವ ದೊಡ್ಡ ತಲ್ಲಣವಾಗಿದೆ ಎಂದು ಅಭಿಪ್ರಾಯಿಸಿದರು.







